ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಕೋವಿಡ್ ನಿರ್ವಹಣೆಯ ಲೆಕ್ಕ ಪರಿಶೋಧನೆ ನಡೆಸಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಕೋವಿಡ್ಗೆ ಸಂಬಂಧಿಸಿದ ದತ್ತಾಂಶಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯ ಸರ್ಕಾರವು ಕೋವಿಡ್ ಅಂಕಿಅಂಶಗಳನ್ನು ಮರೆಮಾಚಿದೆ. ಅವರು ಜನರಿಗೆ ನೆರವಾಗಲು ಇಚ್ಛಿಸುವುದಿಲ್ಲ. ಕೋವಿಡ್ ರೋಗಿಗಳಿಗೆ ಔಷಧಿ ಸಿಗುತ್ತಿಲ್ಲ. ಔಷಧಿಗಳನ್ನು ಕಾಳಸಂತೆಯಲ್ಲಿಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಿದೆ. ಎಲ್ಲ ಹೊರೆ ಜನ ಸಾಮಾನ್ಯರ ಮೇಲೆ ಹಾಕಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಸಾವಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸರ್ಕಾರ ನೀಡಿಲ್ಲ. ಸೋಂಕಿನಿಂದ ಮೃತಪಟ್ಟವರಿಗೆ ಯಾವುದೇ ನೆರವು ನೀಡಿಲ್ಲ.ಸರ್ಕಾರವು ಕೋವಿಡ್ ಸಾವಿನ ವಿವರಗಳನ್ನು ಏಕೆ ಬಹಿರಂಗಪಡಿಸಿಲ್ಲ ? ಏಕೆಂದರೆ ಜನರಿಗೆ ಸಹಾಯ ಮಾಡಲು ಬಯಸುತ್ತಿಲ್ಲ ಎಂದಿದ್ದಾರೆ.