ಚಂಡೀಗಡ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ವರ್ಚಸ್ಸು ದೇಶದೆಲ್ಲೆಡೆ ದಿನೇದಿನೇ ಹೆಚ್ಚುತ್ತಿದೆ. ಹರಿಯಾಣ ಜಿಲ್ಲಾ ಪಂಚಾಯ್ತಿ ಚುನಾವಣೆ ಫಲಿತಾಂಶ ಭಾನುವಾರ ಘೋಷಣೆಯಾಗಿದ್ದು, ಬಿಜೆಪಿ, ಆಮ್ ಆದ್ಮಿ ಮತ್ತು ಲೋಕದಳ್ ಪಕ್ಷಗಳು ಪ್ರಾಬಲ್ಯ ಮೆರೆದಿವೆ.
ಅಂಬ್ಲ, ಯಮುನಾನಗರ ಮತ್ತು ಗುರುಗ್ರಾಮ ಸೇರಿದಂತೆ ಏಳು ಜಿಲ್ಲೆಗಳ ಜಿಲ್ಲಾ ಪಂಚಾಯ್ತಿಯ 102 ಸ್ಥಾನಗಳಲ್ಲಿ ಆಡಳಿತಾರೂಢ ಬಿಜೆಪಿ 22 ಸ್ಥಾನಗಳನ್ನು ಗೆದ್ದುಕೊಂಡಿದೆ. ಅಚ್ಚರಿಯ ಫಲಿತಾಂಶ ನೀಡಿರುವ ಆಮ್ ಆದ್ಮಿ ಪಕ್ಷ ಸಿರ್ಸ, ಅಂಬ್ಲ, ಯಮುನಾನಗರ ಮತ್ತು ಜಿಂದ್ ಜಿಲ್ಲೆಗಳ 15 ಸ್ಥಾನಗಳಲ್ಲಿ ಜಯಶಾಲಿಯಾಗಿದೆ.
ಎಎಪಿ 100 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಭಾರತ ರಾಷ್ಟ್ರೀಯ ಲೋಕ ದಳ 14 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಪಕ್ಷವು 72 ಕ್ಷೇತ್ರಗಳಲ್ಲಿ ಕಣದಲ್ಲಿತ್ತು. ಕಾಂಗ್ರೆಸ್ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿರಲಿಲ್ಲ. ಸಾಕಷ್ಟು ಪಕ್ಷೇತರ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ.