ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕೀರ್ಣ ವಿಷಯಗಳಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ: ಜೆ.ಪಿ.ನಡ್ಡಾ

ವಿದೇಶಾಂಗ ನೀತಿ ಕುರಿತು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಸಾಧನೆಗೆ ನಡ್ಡಾ ಶ್ಲಾಘನೆ
Last Updated 22 ಫೆಬ್ರುವರಿ 2023, 14:49 IST
ಅಕ್ಷರ ಗಾತ್ರ

ನವದೆಹಲಿ: ‘ಸಂಕೀರ್ಣ ವಿಷಯಗಳಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತವು ಎಂದೂ ನಾಚಿಕೆಪಟ್ಟುಕೊಂಡಿಲ್ಲ. ಜೊತೆಗೆ, ವಿಶ್ವವು ಭಾರತವನ್ನು ನೋಡುವ ದೃಷ್ಟಿಕೋನವನ್ನು ಮೋದಿ ಅವರು ಬದಲಾಯಿಸಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬುಧವಾರ ಅಭಿಪ್ರಾಯಪಟ್ಟರು.

‘ಮೋದಿ: ಶೇಪಿಂಗ್‌ ಎ ಗ್ಲೋಬಲ್‌ ಆರ್ಡರ್‌ ಇನ್‌ ಫ್ಲುಕ್ಸ್‌’ ಎಂಬ ಹೆಸರಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕಠಿಣ ನಿರ್ಧಾರ ಕೈಗೊಳ್ಳಲು ಹಿಂದಿನಂತೆ ಈಗ ಭಾರತವು ನಾಚಿಕೆಪಟ್ಟುಕೊಳ್ಳುತ್ತಿಲ್ಲ. ಇದಕ್ಕೆ ಉಕ್ರೇನ್‌–ರಷ್ಯಾ ಯುದ್ಧದ ಕುರಿತು ಭಾರತ ತೆಗೆದುಕೊಂಡ ನಿಲುವೇ ಸಾಕ್ಷಿ’ ಎಂದರು.

‘ಉಕ್ರೇನ್‌ ಯುದ್ಧದ ಕುರಿತು ಭಾರತ ತೆಗೆದುಕೊಂಡ ನಿರ್ಧಾರವನ್ನು ಬಹುಶಃ ಹೆಚ್ಚಿನ ದೇಶಗಳು ಒಪ್ಪಿಕೊಳ್ಳದೇ ಇರಬಹುದು. ಆದರೆ, ಭಾರತವು ಕಠಿಣ ನಿರ್ಧಾರ ತೆಗೆದುಕೊಂಡಿತು ಹಾಗೂ ತನ್ನ ನಿಲುವಿಗೆ ಇಂದಿಗೂ ಬದ್ಧವಾಗಿದೆ ಎಂಬುದನ್ನಂತು ಎಲ್ಲಾ ದೇಶಗಳು ಪ್ರಶಂಸಿಸಿವೆ’ ಎಂದರು.

‘ಮತಬ್ಯಾಂಕ್‌ ರಾಜಕಾರಣದ ಕಾರಣಕ್ಕಾಗಿ ಭಾರತ ನಾಯಕರು ಈ ಹಿಂದೆ ಇಸ್ರೇಲ್‌ಗೆ ಭೇಟಿ ನೀಡುವ ‘ಧೈರ್ಯ’ ಮಾಡುತ್ತಿರಲಿಲ್ಲ. ಆದರೆ, ಇದನ್ನು ಮೋದಿ ಅವರು ಬದಲಾಯಿಸಿದರು. ಮೋದಿ ಅವರು ಕೇವಲ ಇಸ್ರೇಲ್‌ ಮಾತ್ರವಲ್ಲ ಪ್ಯಾಲಿಸ್ಟೇನ್‌ಗೂ ಭೇಟಿ ನೀಡಿದ್ದಾರೆ’ ಎಂದರು.

‘ಪಾಕಿಸ್ತಾನ ಜೊತೆಗಿನ ಸಂಬಂಧದ ಮೇಲೆ ಯಾವ ಪರಿಣಾಮ ಉಂಟಾಗಬಹುದು ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆಯೇ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುವುದರಲ್ಲಿ ಮೋದಿ ಅವರು ಯಶಸ್ವಿಯಾಗಿದ್ದಾರೆ. ಈ ಹಿಂದೆ ಇದು ಹೀಗೆ ಇರಲಿಲ್ಲ’ ಎಂದರು.

‘ಮೋದಿ ಸರ್ಕಾರವು ವಿದೇಶಾಂಗ ನೀತಿ ಸಂಬಂಧ ಹಲವು ಸಾಧನೆಗಳನ್ನು ಮಾಡಿದೆ. ವಿದೇಶಾಂಗ ನೀತಿಯನ್ನು ‘ಪ್ರಜಾಸತ್ತಾತ್ಮಕ’ಗೊಳಿಸಿರುವುದು ಇದರಲ್ಲಿ ಪ್ರಮುಖವಾದುದು’ ಎಂದು ಪುಸ್ತಕದ ಸಂಪಾದಕರಲ್ಲಿ ಒಬ್ಬರಾದ ಬಿಜೆಪಿಯ ವಿದೇಶಾಂಗ ಇಲಾಖೆ ಉಸ್ತುವಾರಿ ವಿಜಯ್‌ ಚೌಥಾಯಿವಾಲಾ ಅಭಿಪ್ರಾಯಪಟ್ಟರು.

ವಿಶ್ವವು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಯಿಸುವಲ್ಲಿ ಮೋದಿ ಅವರ ಕೊಡುಗೆಗಳ ಬಗ್ಗೆ ಕಡಿಮೆ ಪುಸ್ತಕಗಳು ಬಂದಿವೆ. ಮೋದಿ ಅವರ ಕೊಡುಗೆಗಳ ಕುರಿತು ಈ ಪುಸ್ತಕವು ಚರ್ಚೆ ಹುಟ್ಟುಹಾಕಲಿದೆ ಎಂದು ವಿಜಯ್‌ ಚೌಥಾಯಿವಾಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT