ಕೋಲ್ಕತ್ತ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ಗೋಧಿ ಪೂರೈಕೆಯಲ್ಲಿ ಕೊರತೆ ಕಾಡುತ್ತಿದೆಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದ್ದಾರೆ.
ಬಂಕುರಾ ಜಿಲ್ಲೆಯಲ್ಲಿ ಟಿಎಂಸಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಮತಾ, 'ಕೇಂದ್ರವು ನಮಗೆ ಗೋಧಿ ಪೂರೈಸುತ್ತಿಲ್ಲ. ವಿತರಿಸಲು ಗೋಧಿ ಇಲ್ಲ ಎಂದು ಹೇಳುತ್ತಿದೆ. ದೇಶದಾದ್ಯಂತ ಗೋಧಿ ಕೊರತೆಯಿದೆ. ಕೇಂದ್ರವು ಆರ್ಥಿಕ ನೀತಿ ದುರುಪಯೋಗದಿಂದ ಬಿಕ್ಕಟ್ಟು ಎದುರಾಗಿದೆ' ಎಂದು ಆರೋಪಿಸಿದರು.
ನೋಟು ಅಮಾನ್ಯೀಕರಣ ನೀತಿಯನ್ನು ಖಂಡಿಸಿರುವ ಮಮತಾ, 'ಅದರಿಂದ ಸಾಧಿಸಿದ್ದೇನು? ಎಲ್ಲ ಹಣ ಎಲ್ಲಿ ಹೋಯಿತು' ಎಂದು ಪ್ರಶ್ನಿಸಿದರು.
'ಕೇಂದ್ರವು ನಮಗೆ ಹಣಕಾಸು ನೆರವು ಒದಗಿಸಬೇಕು. ರಾಜ್ಯಗಳಿಗೆ ಹಣಕಾಸು ನೆರವು ನೀಡಲು ಸಾಧ್ಯವಾಗದಿದ್ದರೆ, ಈ ದೇಶವನ್ನು ಆಳುವ ಹಕ್ಕು ನಿಮಗಿಲ್ಲ' ಎಂದು ಹೇಳಿದರು.
'ದೇಶದ ಆಸ್ತಿ, ರೈಲ್ವೆ, ವಿಮೆ ಹೀಗೆ ಎಲ್ಲವನ್ನೂ ಬಿಜೆಪಿ ಮಾರಾಟ ಮಾಡುವಲ್ಲಿ ನಿರತವಾಗಿದೆ. ಆರ್ಥಿಕತೆಯನ್ನು ನಿಭಾಯಿಸುವ ರೀತಿ ಇದಾಗಿದೆ. ದೇಶ ಕಂಡ ಅಸಮರ್ಥ ಪಕ್ಷ ಬಿಜೆಪಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದರೆ ದೇಶಕ್ಕೆ ಒಳಿತಾಗಲಿದೆ' ಎಂದು ಹೇಳಿದರು.