ಕೋಲ್ಕತ್ತಾ: ನಗರದ ಎಸ್ಪ್ಲಾನಡೆ ಪ್ರದೇಶದಲ್ಲಿ ತ್ಯಾಜ್ಯ ವಸ್ತುಗಳು ಮತ್ತು ನಿರುಪಯುಕ್ತ ಪರಿಕರಗಳಿಂದ ತಯಾರಿಸಲಾದ ಕಲಾಕೃತಿಗಳನ್ನೊಳಗೊಂಡ ಭಾರತದ ಮೊದಲ ‘ಟೈರ್ ಪಾರ್ಕ್‘ ಶೀಘ್ರದಲ್ಲೇ ಆರಂಭವಾಲಿದೆ.
‘ವೇಸ್ಟ್ನಿಂದ ಆರ್ಟ್ (ತ್ಯಾಜ್ಯದಿಂದ ಕಲೆ)‘ ಪರಿಕಲ್ಪನೆಯಲ್ಲಿ ನಿರ್ಮಾಣವಾಗುತ್ತಿರುವ ಈ ಕಲಾತ್ಮಕ ಉದ್ಯಾನ, ದೇಶದಲ್ಲೇ ವಿಶಿಷ್ಟವಾಗಿದೆ.
‘ಯಾವುದೇ ನಿರುಪಯುಕ್ತ ವಸ್ತುವನ್ನು ತ್ಯಾಜ್ಯವೆಂದು ಪರಿಗಣಿಸಬಾರದು. ಬದಲಿಗೆ ಅದಕ್ಕೆ ಕಲೆಯ ರೂಪ ಕೊಡುವ ಮೂಲಕ ಮರುಬಳಕೆ ಮಾಡಬಹುದು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆ(ಡಬ್ಲ್ಯುಬಿಟಿಸಿ) ವಿವಿಧ ತ್ಯಾಜ್ಯವಸ್ತುಗಳಿಂದ ಈ ಟೈರ್ ಪಾರ್ಕ್ ಅನ್ನು ರೂಪಿಸುತ್ತಿದೆ‘ ಎಂದು ಡಬ್ಲ್ಯುಬಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜನ್ವಿರ್ ಕಪೂರ್ ತಿಳಿಸಿದರು.
‘ನಿರುಪಯುಕ್ತ ಟೈರ್ಗಳು, ವಿವಿಧ ಬಸ್ ಡಿಪೊಗಳಲ್ಲಿರುವ ತ್ಯಾಜ್ಯ ಪರಿಕರಗಳನ್ನು ಸಂಗ್ರಹಿಸಿರುವ ನಮ್ಮ ಇಲಾಖೆಯ ನೌಕರರು, ಅವುಗಳಿಗೆ ವಿಶಿಷ್ಟ ರೂಪ ನೀಡಿ, ಬಣ್ಣ ಹಚ್ಚಿ ಕಲಾಕೃತಿಗಳಗಿಸಿದ್ದಾರೆ. ಇವುಗಳನ್ನು ಪಾರ್ಕ್ನಲ್ಲಿ ಜೋಡಿಸಲಾಗುತ್ತದೆ‘ ಎಂದು ರಾಜನ್ವಿರ್ ಕಪೂರ್ ತಿಳಿಸಿದರು.
‘ಕೋಲ್ಕತ್ತಾದ ಎಸ್ಪ್ಲಾನಡೆ ಪ್ರದೇಶದಲ್ಲಿ ತಲೆಎತ್ತಲಿರುವ ಈ ಟೈರ್ ಪಾರ್ಕ್ನಲ್ಲಿ ಸಣ್ಣದೊಂದು ಕೆಫೆ ಇದೆ. ಸಾರ್ವಜನಿಕರು ಕುಳಿತುಕೊಂಡು, ಟೈರ್ ಪಾರ್ಕ್ನಲ್ಲಿ ಅಲಂಕರಿಸುವ ಕಲಾಕೃತಿಗಳನ್ನು ನೋಡುತ್ತಾ ಆನಂದಿಸಬಹುದು‘ ಎಂದು ಕಪೂರ್ ತಿಳಿಸಿದರು.
‘ಜನ ಜಂಗುಳಿಯಿಂದ ತುಂಬಿ ತುಳುಕುವ ಪ್ರದೇಶದಲ್ಲಿ ಟೈರ್ ಪಾರ್ಕ್, ಶಾಂತಿಯ ದ್ವೀಪದಂತಾಗುತ್ತದೆ‘ ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ. ಶೀಘ್ರದಲ್ಲೇ ಪಾರ್ಕ್ ಉದ್ಘಾಟನೆಯ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.