ಬೆಳಗಾವಿ: ‘ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರಾಠಿಗರ ಮೇಲೆ ‘ದಾದಾಗಿರಿ’ ಮಾಡುತ್ತಿದ್ದಾರೆ’ ಎಂದು ಮಂಗಳವಾರ ಮಹಾರಾಷ್ಟ್ರ ವಿಧಾನ ಪರಿಷತ್ ಅಧಿವೇಶನದಲ್ಲಿ ಸದಸ್ಯೆ ಡಾ.ಮನಿಷಾ ಹರಿಹಾಯ್ದಿದ್ದಾರೆ.
‘ಗಡಿಯಲ್ಲಿರುವ 865 ಹಳ್ಳಿಗಳಿಗೆ ಮಹಾರಾಷ್ಟ್ರ ‘ಮಹಾತ್ಮ ಜ್ಯೋತಿರಾವ್ ಫುಲೆ ಜನಾರೋಗ್ಯ ಯೋಜನೆ’ ಘೋಷಣೆ ಮಾಡಿದೆ. ಇದನ್ನು ಪ್ರಶ್ನಿಸಲು ಬೊಮ್ಮಾಯಿ ಅವರಿಗೆ ಎಷ್ಟು ಧೈರ್ಯ? ನಮ್ಮ ಜನರಿಗೆ ನಾವು ಆರೋಗ್ಯ ವಿಮೆ ಘೋಷಣೆ ಮಾಡಿದರೆ ತಪ್ಪೇನು?’ ಎಂದು ಡಾ.ಮನಿಷಾ ಪ್ರಶ್ನಿಸಿದ್ದಾರೆ.
‘ಗಡಿ ಸಮಸ್ಯೆ ಸುಪ್ರೀಂ ಕೋರ್ಟ್ನಲ್ಲಿದೆ. 865 ಹಳ್ಳಿಗಳು ಯಾವ ರಾಜ್ಯಕ್ಕೆ ಸೇರಿದ್ದು ಎಂದು ನಿರ್ಧಾರವಾಗಿಲ್ಲ. ಹಾಗಿದ್ದಾಗ ಈ ಪ್ರದೇಶದಲ್ಲಿ ಯಾವ ಯೋಜನೆಯನ್ನಾದರೂ ನಾವು ತರಬಹುದು. ಇದಕ್ಕೆ ಮುಖ್ಯಮಂತ್ರಿ ಏಕನಾಥ ಶಿಂಧೆ ದಿಟ್ಟ ಉತ್ತರ ಕೊಡಬೇಕು’ ಎಂದೂ ಆಗ್ರಹಿಸಿದ್ದಾರೆ.
ಅವಮಾನಕ್ಕೆ ಖಂಡನೆ: ಈ ಬಗ್ಗೆ ಕಿಡಿ ಕಾರಿದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ಸಚಿವೆ ಹೇಳಿಕೆ ಖಂಡನೀಯ. ಕೇಂದ್ರ ಗೃಹಸಚಿವ ಅಮಿತ್ ಶಾ ಮಹಾರಾಷ್ಟ್ರದ ದುರ್ನಡತೆಗೆ ಲಗಾಮು ಹಾಕಬೇಕು’ ಎಂದಿದ್ದಾರೆ.
‘ಸಂವಿಧಾನ ಬಾಹಿರವಾಗಿ ನಡೆದುಕೊಂಡಿದ್ದು ಮಹಾರಾಷ್ಟ್ರ ಸರ್ಕಾರ. ಇದನ್ನು ಸರ್ಕಾರ ಖಂಡಿಸಬೇಕು. ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಎರಡೂ ರಾಜ್ಯಗಳು ಚಕಾರ ಎತ್ತಬಾರದು ಎಂದು ಅಮಿತ್ ಶಾ ಡಿಸೆಂಬರ್ 14ರಂದು ಸಭೆ ಮಾಡಿದ್ದರು. ಮಹಾರಾಷ್ಟ್ರ ಸರ್ಕಾರ ಇದನ್ನೂ ಧಿಕ್ಕರಿಸಿದೆ. ಇದಕ್ಕೆ ಲಗಾಮು ಹಾಕಬೇಕು’ ಎಂದು ಹೇಳಿದ್ದಾರೆ.