ನವದೆಹಲಿ: ಇತ್ತೀಚೆಗೆ ಲಡಾಖ್ ಗಡಿಯಲ್ಲಿ ಚೀನಾದ ಸೈನಿಕರನ್ನು ಹಿಮ್ಮೆಟ್ಟಿಸಿ ಎದೆಗಾರಿಕೆ ತೋರಿದ್ದ ಇಂಡೋ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ 294 ಯೋಧರಿಗೆ ಡೈರೆಕ್ಟರ್ ಜನರಲ್ ಪ್ರಶಂಸೆ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಐಟಿಬಿಪಿ ಶುಕ್ರವಾರ ತಿಳಿಸಿದೆ.
ಲಡಾಖ್ ಪ್ರದೇಶದಲ್ಲಿ ಮೇ ಹಾಗೂ ಜೂನ್ನಲ್ಲಿ ಚೀನಾ ಸೇನೆಯ ಯೋಧರನ್ನು ಎದುರಿಸಿದ21 ಸಿಬ್ಬಂದಿಗೆ ಶೌರ್ಯ ಪದಕ ನೀಡಲು ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ ಎಂದೂ ಐಟಿಬಿಪಿ ತಿಳಿಸಿದೆ. ಭಾರತ–ಚೀನಾ ಗಡಿಯಲ್ಲಿ ನಡೆದಿದ್ದ ಘರ್ಷಣೆ ಕುರಿತ ಮಾಹಿತಿಯನ್ನುಇದೇ ಮೊದಲ ಬಾರಿಗೆ ನೀಡಿರುವ ಐಟಿಬಿಪಿ, ‘ಮುನ್ನುಗ್ಗುತ್ತಿದ್ದ ಚೀನಾ ಪೀಪಲ್ಸ್ ಲಿಬರೇಷನ್ ಸೇನೆಯ(ಪಿಎಲ್ಎ) ಯೋಧರಿಗೆ ನಮ್ಮ ಸಿಬ್ಬಂದಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಇಡೀ ರಾತ್ರಿ ಸಿಬ್ಬಂದಿ ಅಲ್ಲಿ ಹೋರಾಡಿದ್ದರು. ಕಲ್ಲು ಎಸೆಯುತ್ತಿದ್ದ ಪಿಎಲ್ಎ ಯೋಧರಿಗೆ ತಕ್ಕ ಉತ್ತರವನ್ನು ನಮ್ಮ ಸಿಬ್ಬಂದಿ ನೀಡಿದ್ದರು’ ಎಂದು ತಿಳಿಸಿದೆ.
ಭಾರತೀಯ ಸೇನೆಯ ಯೋಧರಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದ ಐಟಿಬಿಪಿ ಸಿಬ್ಬಂದಿ, ಘರ್ಷಣೆ ವೇಳೆ ಗಾಯಗೊಂಡಿದ್ದ ಭಾರತೀಯ ಸೇನೆಯ ಯೋಧರನ್ನು ರಕ್ಷಿಸಿದ್ದರು. ಜೂನ್ 15 ಮತ್ತು 16ರಂದು ಲಡಾಖ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಮೃತಪಟ್ಟಿದ್ದರು.
ಛತ್ತೀಸ್ಗಡದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆರು ಐಟಿಬಿಪಿ ಸಿಬ್ಬಂದಿಗೂಡೈರೆಕ್ಟರ್ ಜನರಲ್ ಪ್ರಶಂಸೆ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಐಟಿಬಿಪಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.