ನವದೆಹಲಿ: ‘ಕಾಶಿ ಹಾಗೂ ಮಥುರಾ ವಿವಾದಗಳನ್ನೂ ಹಿಂದೂಗಳ ಪರವಾಗಿಯೇ ಇತ್ಯರ್ಥಗೊಳಿಸಬೇಕು’ ಎಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಗುರುವಾರ ಹೇಳಿದರು.
‘ಈ ವಿವಾದಾಸ್ಪದ ವಿಚಾರಗಳ ಬಗ್ಗೆ ಅಂತಿಮ ನಿರ್ಧಾರವನ್ನು ಸಂತರೇ ತೆಗೆದುಕೊಳ್ಳಲಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದರು. ಕಾಶಿ ಹಾಗೂ ಮಥುರಾದಲ್ಲಿ ಮಸೀದಿಗಳು ಇರುವ ನಿವೇಶಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು' ಎಂದು ಹಲವು ಹಿಂದೂಪರ ಸಂಘಟನೆಗಳು ಬೇಡಿಕೆ ಇರಿಸಿವೆ.
‘ನಾನು ಸೇರಿದಂತೆ ಹಲವು ಬಿಜೆಪಿ ನಾಯಕರು ಬಾಬರಿ ಮಸೀದಿ ಧ್ವಂಸದ ಹಿಂದೆ ಇದ್ದೆವು ಎನ್ನುವ ಆರೋಪಗಳನ್ನು ಜನರು ಮಾಡುತ್ತಿದ್ದರು. ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ನಮ್ಮ ಮೇಲಿನ ಹೊರೆ ಇಳಿಸಿದೆ’ ಎಂದರು.
ಮಸೀದಿ ಕಟ್ಟಡವನ್ನು ಕೆಡವದೇ ಹೇಗೆ ರಾಮ ಮಂದಿರ ನಿರ್ಮಾಣ ಸಾಧ್ಯ ಎಂದು ಪ್ರಶ್ನಿಸಿದ ವಿನಯ್, ‘ಅದನ್ನು ಹೇಗೆ ಕೆಡವಲಾಯಿತು ಎನ್ನುವುದು ಬೇರೆ ವಿಷಯ. ಆದರೆ ಆ ಕಟ್ಟಡ ಧ್ವಂಸವಾಗದೇ ಇದ್ದಿದ್ದರೆ, ಇಂದು ಅಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ’ ಎಂದರು.