ಶ್ರೀನಗರ: ಸರ್ಕಾರಿ ನೌಕರಿ ಪಡೆಯುವಲ್ಲಿ ‘ದೇಶವಿರೋಧಿ ಶಕ್ತಿ’ಗಳು ಕೆಲಸ ಮಾಡಿವೆ ಎಂಬ ವರದಿ ಹಿನ್ನೆಲೆಯಲ್ಲಿ 2018ರ ಮೇ ತಿಂಗಳ ನಂತರ ಕಾಶ್ಮೀರ ಕಣಿವೆಯಾದ್ಯಂತ ನೇಮಕಗೊಂಡ ಸರ್ಕಾರಿ ನೌಕರರ ಕುರಿತು ಪರಿಶೀಲನೆ ನಡೆಸುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ನಿರ್ಧರಿಸಿದೆ.
ಕಾಶ್ಮೀರ ವಿಭಾಗೀಯ ಆಯುಕ್ತ ಪಾಂಡುರಂಗ ಪೊಲೆ ಅವರು, ಈ ಸಂಬಂಧ ಕಾಶ್ಮೀರದ ಹತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಸರ್ಕಾರದ ನಿರ್ದೇಶನವನ್ನು ಪಾಲಿಸುವಂತೆ ಸೂಚನೆ ನೀಡಿದ್ದು, ನೇಮಕಗೊಂಡ ಉದ್ಯೋಗಿಗಳ ಕುರಿತು ಆದಷ್ಟು ಬೇಗ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ.
‘ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ನೌಕರರ ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದ್ದು, ಹೊಸದಾಗಿ ನೇಮಕಗೊಂಡವರ ಪೂರ್ವಪರವನ್ನು ಮುಂಚಿತವಾಗಿಯೇ ಪೊಲೀಸ್ ಇಲಾಖೆಯಿಂದ ಪರಿಶೀಲನೆ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳ ನೇಮಕಾತಿಗಳಲ್ಲಿ ಕಲ್ಲು ತೂರಾಟ ಮತ್ತು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವ ಹಲವು ಜನರು ಸರ್ಕಾರಿ ಸೇವೆಗೆ ಸೇರಿದ್ದಾರೆ ಎಂಬ ವರದಿಗಳಿವೆ.ಹಾಗಾಗಿ ಪರಿಶೀಲನೆಗೆ ಆದೇಶಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಕಳೆದ ವರ್ಷ ಕಾಶ್ಮೀರದಲ್ಲಿ 24 ಕ್ಕೂ ಹೆಚ್ಚು ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ಸಂವಿಧಾನದ ವಿಧಿ 311 (2) (ಸಿ) ಅಡಿ ವಜಾಗೊಳಿಸಿದೆ.