ಟಾಯ್ಕಥಾನ್ ಸ್ಪರ್ಧೆ: ಜೆಎಂಐ ವಿದ್ಯಾರ್ಥಿಗಳ ತಂಡಕ್ಕೆ ಜಯ

ನವದೆಹಲಿ: ಈ ವರ್ಷದ ‘ಟಾಯ್ಕಥಾನ್’ ಸ್ಪರ್ಧೆಯಲ್ಲಿ ಇಲ್ಲಿನ ಜಾಮಿಯಾ ಮಿಲಿಯಾ ಇಸ್ಲಾಮಿಯಾದ (ಜೆಎಂಐ) ಮೂವರು ವಿದ್ಯಾರ್ಥಿಗಳ ತಂಡವು ಜಯ ಗಳಿಸಿದೆ.
ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಸಾರ್ಥಕ್ ಕುಮಾರ್, ನಿಖಿಲ್ ಯಾದವ್ ಮತ್ತು ಅಲ್ಜಿಯಾನ್ ಅನ್ಸಾರಿ ಅವರಿರುವ ತಂಡವು ಗಣಿತ ಕಲಿಕೆಗೆ ಸಂಬಂಧಿಸಿ ವಿನ್ಯಾಸಗೊಳಿಸಿರುವ ‘ಮ್ಯಾಥಮ್ಯಾಟಿಕಲ್ ಬೋರ್ಡ್ಗೇಮ್’ ಎಂಬ ಮಾದರಿಗೆ ಬಹುಮಾನ ಬಂದಿದೆ.
‘ಕೇಂದ್ರ ಸರ್ಕಾರ ಆಯೋಜಿಸಿದ್ದ ಟಾಯ್ಕಥಾನ್ ಸ್ಪರ್ಧೆಯಲ್ಲಿ ಜೆಎಂಐನ ‘ಎವಿಡೆಂಟ್’ ತಂಡವು ಗೆಲುವು ಸಾಧಿಸಿದೆ. ಈ ವಿದ್ಯಾರ್ಥಿಗಳಿಗೆ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಶಂಶಾದ್ ಅಹಮದ್ ಅವರು ಮಾರ್ಗದರ್ಶನ ನೀಡಿದ್ದರು’ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
‘ರಾಷ್ಟ್ರ ನಿರ್ಮಾಣದಲ್ಲಿ ಜೆಎಂಐ ಸದಾ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ನಮ್ಮ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಬೆಳಕಿಗೆ ತಂದು, ಆ ಮೂಲಕ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲು ಪ್ರಯತ್ನಿಸುತ್ತದೆ’ ಎಂದು ಜೆಎಂಐ ಕುಲಪತಿ ನಜ್ಮಾ ಅಖ್ತರ್ ಹೇಳಿದ್ದಾರೆ.
ಈ ವರ್ಷದ ಟಾಯ್ಕಥಾನ್ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ 1.2 ಲಕ್ಷ ಜನರು ಭಾಗವಹಿಸಿದ್ದರು. 17,000ಕ್ಕೂ ಹೆಚ್ಚು ನವೀನ ಯೋಜನೆಗಳು ಸಲ್ಲಿಕೆಯಾಗಿದ್ದವು. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಸ್ಪಾರ್ಟ್ಅಪ್ಗಳಿಗೆ ಒಟ್ಟು ₹ 50 ಲಕ್ಷ ಮೊತ್ತದ ಬಹುಮಾನ ನೀಡಲಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.