ನವದೆಹಲಿ: ಕೇಸರಿ ಧ್ವಜದ ವಿಚಾರವಾಗಿ ಕರ್ನಾಟಕದ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆಯನ್ನು ಬಿಜೆಪಿ ಒಪ್ಪುವುದಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಅಂತಹ ಪದಗಳನ್ನು ಬಳಸಬಾರದು ಎಂದು ನಯವಾಗಿ ಈಶ್ವರಪ್ಪ ಅವರಿಗೆ ತಿಳಿಹೇಳಿದ್ದೇನೆ ಎಂಬುದಾಗಿಯೂ ‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ತ್ರಿವರ್ಣ ಧ್ವಜ ರಾಷ್ಟ್ರೀಯ ಧ್ವಜವಾಗಿದ್ದು ಅದನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ನಡ್ಡಾ ಹೇಳಿದ್ದಾರೆ.
‘ಇದು ಸಾಧ್ಯವಿಲ್ಲ... ನಾವು (ಬಿಜೆಪಿ) ರಾಷ್ಟ್ರೀಯವಾದಿಗಳು. ನಾವು ಸಂವಿಧಾನ ಮತ್ತು ಕಾನೂನನ್ನು ಗೌರವಿಸುತ್ತೇವೆ. ಸಚಿವರು ನೀಡುವ ಬೇಜವಾಬ್ದಾರಿ ಹೇಳಿಕೆಗಳನ್ನು ಬಿಜೆಪಿ ಸಹಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸಲಾಗುವುದೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ಈಶ್ವರಪ್ಪ, ‘ಅದು ಇಂದು ಸಾಧ್ಯವಿಲ್ಲ. ಮುಂದೊಂದು ದಿನ ಸಾಧ್ಯವಾಗಲಿದೆ’ ಎಂದು ಹೇಳಿದ್ದರು.
‘ಹಿಂದು ವಿಚಾರ ಮತ್ತು ಹಿಂದುತ್ವದ ಬಗ್ಗೆ ದೇಶದಲ್ಲಿ ಚರ್ಚೆಗಳಾಗುತ್ತಿವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತೇವೆ ಎಂದು ಹೇಳಿದ್ದಾಗ ಜನ ನಗಾಡಿದ್ದರು. ನಾವದನ್ನು ಸಾಧಿಸಿಲ್ಲವೇ’ ಎಂದು ಈಶ್ವರಪ್ಪ ಪ್ರಶ್ನಿಸಿದ್ದರು.