ಶನಿವಾರ, ಮಾರ್ಚ್ 25, 2023
28 °C

ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ; ಮಮತಾ ಬ್ಯಾನರ್ಜಿಗೆ ₹5 ಲಕ್ಷ ದಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ವಿಮ ಬಂಗಾಳದ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸುವೇಂದು ಅಧಿಕಾರಿಯ ಆಯ್ಕೆಯನ್ನು ಪ‍್ರಶ್ನಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಕಲ್ಕತ್ತ ಹೈಕೋರ್ಟ್‌ನ ನ್ಯಾಯಮೂರ್ತಿ ಕೌಶಿಕ್‌ ಚಂದಾ ಅವರು ಬುಧವಾರ ಹಿಂದೆ ಸರಿದಿದ್ದಾರೆ. 

ಇದೇವೇಳೆ, ನ್ಯಾಯಮೂರ್ತಿ ಚಂದಾ ಅವರಿಗೆ ಬಿಜೆಪಿ ಲಿಂಕ್ ಇದೆ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ(ವಕೀಲರು)ಗೆ ನ್ಯಾಯಾಧೀಶರು ₹ 5 ಲಕ್ಷ ದಂಡ ವಿಧಿಸಿದ್ದಾರೆ. ಬಿಜೆಪಿ ಲಿಂಕ್ ನ್ಯಾಯಾಧೀಶರು ವಿಚಾರಣಾ ಪೀಠದಲ್ಲಿ ಇರಬಾರದು ಎಂದು ಹೇಳುವ ಮೂಲಕ ನ್ಯಾಯಾಂಗದ ಹೆಸರು ಕೆಡಿಸುವ ಪ್ರಯತ್ನ ನಡೆಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರಿಗೆ ದಂಡ ವಿಧಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ದಂಡದ ಮೊತ್ತವನ್ನು ಪಶ್ಚಿಮ ಬಂಗಾಳದ ಬಾರ್‌ ಕೌನ್ಸಿಲ್‌ಗೆ ಎರಡು ವಾರದೊಳಗೆ ಜಮಾ ಮಾಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. 

‘ಈ ಪ್ರಕರಣದಲ್ಲಿ ನನ್ನ ಉಪಸ್ಥಿತಿಯಿಂದ ಯಾವ ರೀತಿ ಹಿತಾಸಕ್ತಿ ಸಂಘರ್ಷವಾಗಲಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ತೊಡಕನ್ನು ಸೃಷ್ಟಿಸಿರುವವರಿಗೆ ವಿವಾದವನ್ನು ಜೀವಂತವಾಗಿಡಲು ಅವಕಾಶ ನೀಡಬಾರದೆಂಬ ಕಾರಣಕ್ಕೆ ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇನೆ. ಇಂತಹ ಅನಗತ್ಯ ಸಮಸ್ಯೆ ಮುಂದುವರಿದರೆ ಅದು ನ್ಯಾಯದ ಹಿತಾಸಕ್ತಿಗೆ ವಿರುದ್ಧವಾಗಿರುತ್ತದೆ. ವಿಚಾರಣೆ ವೇಳೆ ಸಮಸ್ಯೆಗಳು ಮತ್ತೆ ಕಾಡುತ್ತವೆ’ ಎಂದು ನ್ಯಾಯಾಧೀಶ ಚಂದಾ ಹೇಳಿದ್ದಾರೆ.

ನ್ಯಾಯಮೂರ್ತಿ ಚಂದಾ ಅವರು ಮಮತಾ ಬ್ಯಾನರ್ಜಿ ಅವರ ಚುನಾವಣಾ ಅರ್ಜಿಯ ವಿಚಾರಣೆಯನ್ನು ಜೂನ್‌ 24 ರಂದು ಕಾಯ್ದಿರಿಸಿದ್ದರು.ಇದೀಗ, ಈ ಚುನಾವಣಾ ಅರ್ಜಿಯನ್ನು ಬೇರೆ ನ್ಯಾಯ‍ಪೀಠಕ್ಕೆ ವರ್ಗಾಯಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಅವರಿಗೆ ಮನವಿ ಮಾಡಲಾಗಿದೆ.

2015ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಳ್ಳುವವರೆಗೂ ಕೌಶಿಕ್‌ ಚಂದಾ ಅವರು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದರು. ಹಾಗಾಗಿ ಈ ಅರ್ಜಿಯ ವಿಚಾರಣೆಯಲ್ಲಿ ಪಕ್ಷಪಾತವಾಗುವ ಸಾಧ್ಯತೆಗಳು ಹೆಚ್ಚಿವೆ ಎಂಬ ಮಾತುಗಳು ಕೇಳಿ ಬಂದಿತ್ತು.

‘ನಾನು ಬಿಜೆಪಿಯ ಕಾನೂನು ವಿಭಾಗದಲ್ಲಿ ಕಾರ್ಯನಿರ್ವಹಿಸಿಲ್ಲ. ಆದರೆ, ಕಲ್ಕತ್ತ ಹೈಕೋರ್ಟ್‌ನಲ್ಲಿ ಹಲವು ‍ಪ‍್ರಕರಣಗಳಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿದ್ದೇನೆ’ ಎಂದು ಚಂದಾ ಅವರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು