ಶ್ರೀನಗರ: ಜಮ್ಮು–ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೋಟಿಪೊರಾ ಪ್ರದೇಶದಲ್ಲಿ ಉಗ್ರಗಾಮಿಗಳು ಮಂಗಳವಾರ ನಡೆಸಿದ ಗುಂಡಿನ ದಾಳಿಯಲ್ಲಿ ಕಾಶ್ಮೀರ ಪಂಡಿತರೊಬ್ಬರು ಸಾವನ್ನಪ್ಪಿದ್ದು, ಅವರ ಸಹೋದರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೃತ ವ್ಯಕ್ತಿಯನ್ನು ಸುನೀಲ್ಕುಮಾರ್ ಹಾಗೂ ಗಾಯಗೊಂಡವರನ್ನು ಪಿಂಟು ಕುಮಾರ್ ಎಂದು ಗುರುತಿಸಲಾಗಿದೆ’ ಎಂದು ಪೊಲೀಸ್ ಇಲಾಖೆ ವಕ್ತಾರರೊಬ್ಬರು ತಿಳಿಸಿದ್ದಾರೆ.
‘ಚೋಟಿಪೊರಾ ಪ್ರದೇಶದಲ್ಲಿರುವ ತಮ್ಮ ಸೇಬುಹಣ್ಣಿನ ತೋಟದಲ್ಲಿ ಈ ಇಬ್ಬರು ಕೆಲಸ ಮಾಡುತ್ತಿದ್ದ ವೇಳೆ, ಸಮೀಪದಿಂದಲೇಉಗ್ರರು ಇಬ್ಬರ ಮೇಲೆ ಗುಂಡು ಹಾರಿಸಿದ್ದು, ಸುನೀಲ್ ಕುಮಾರ್ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಪಿಂಟು ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ದಾಳಿಯ ಹೊಣೆಯನ್ನು ಈ ವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಪೊಲೀಸರು ಹಾಗೂ ಭದ್ರತಾ ಪಡೆಗಳು ಘಟನಾ ಪ್ರದೇಶವನ್ನು ಸುತ್ತುವರಿದಿದ್ದು, ದಾಳಿಕೋರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ ಎಂದೂ ತಿಳಿಸಿದ್ದಾರೆ.
ದಾಳಿ ಹೆಚ್ಚಳ: ವಲಸೆ ಕಾರ್ಮಿಕರು ಹಾಗೂ ಸ್ಥಳೀಯರಲ್ಲದವರನ್ನು ಗುರಿಯಾಗಿಸಿ ಕಳೆದ ಅಕ್ಟೋಬರ್ನಿಂದ ಉಗ್ರರು ದಾಳಿಯನ್ನು ಹೆಚ್ಚಿಸಿದ್ದಾರೆ.
‘ಆರ್ಎಸ್ಎಸ್, ಗುಪ್ತಚರ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸುವವರು ಹಾಗೂ ಮೂಲ ಕಾಶ್ಮೀರಿಗಳಲ್ಲದವರುಜಮ್ಮು–ಕಾಶ್ಮೀರದಲ್ಲಿ ಆಸ್ತಿಗಳನ್ನು ಖರೀದಿ ಮಾಡಿದಲ್ಲಿ ಅವರನ್ನು ‘ಆಕ್ರಮಣ’ಕಾರರು ಎಂದೇ ಭಾವಿಸಿ, ಅವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ’ ಎಂದು ಟಿಆರ್ಎಫ್ ಎಚ್ಚರಿಸಿತ್ತು.