ಯುಎಇ ಜೈಲಿನಲ್ಲಿರುವ ಮಗನಿಗೆ ನೆರವು ಕೋರಿ ಅರ್ಜಿ: ಕೇಂದ್ರದ ನಿಲುವೇನು? -ಹೈಕೋರ್ಟ್

ಕೊಚ್ಚಿ: ಬೇಹುಗಾರಿಕೆ ಆರೋಪದಡಿ ಯುಎಇ ಜೈಲಿನಲ್ಲಿ ಬಂಧನಕ್ಕೊಳಗಾಗಿರುವ ತನ್ನ ಮಗನಿಗೆ ಅಗತ್ಯ ಬೆಂಬಲ ನೀಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿ ಬಗ್ಗೆ ತನ್ನ ನಿಲುವು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಮಂಗಳವಾರ ಸೂಚಿಸಿದೆ.
‘ಈ ಬಗ್ಗೆ ನಾವು ಪರಿಶೀಲಿಸುತ್ತೇವೆ. ಕೇಂದ್ರ ಸರ್ಕಾರದ ಪರ ವಕೀಲರಿಗೆ ಇದಕ್ಕೆ ಸಂಬಂಧಿಸಿದಂತೆ ನಿರ್ದೇಶನ ನೀಡಲಾಗುವುದು’ ಎಂದು ನ್ಯಾಯಮೂರ್ತಿ ಬಿ.ಪಿ. ಸುರೇಶ್ ಕುಮಾರ್ ಹೇಳಿದರು.
ಭಾರತಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದಡಿ ಶಿಹಾನಿ ಮೀರಾ ಸಾಹಿಬ್ ಜಮಾಲ್ ಮೊಹಮ್ಮದ್ ಎಂಬುವರನ್ನು ಬಂಧಿಸಲಾಗಿದೆ. 2015ರ ಆಗಸ್ಟ್ 25ರಿಂದ ಜಮಾಲ್, ಅಬುಧಾಬಿ ಕೇಂದ್ರ ಕಾರಾಗೃಹದಲ್ಲಿ ಬಂಧನಕ್ಕೊಳಗಾಗಿದ್ದಾರೆ.
ತನ್ನ ಮಗನಿಗೆ ಅಗತ್ಯ ನೆರವು ಒದಗಿಸುವಂತೆ ಜಮಾಲ್ ಮೊಹಮ್ಮದ್ ತಾಯಿ ಶಾಹುಬನಾಥ್ ಬೀವಿ ಅವರು ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
‘ಯುಎಇನಲ್ಲಿರುವ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳಿಗಾಗಿ ಶಿಹಾನಿ ಮೀರಾ ಬೇಹುಗಾರಿಕೆ ಕೆಲಸ ಮಾಡುತ್ತಿದ್ದರು ಎಂದು ಯುಎಇ ನ್ಯಾಯಾಲಯವು ತೀರ್ಪು ನೀಡಿದೆ. ಅಲ್ಲಿನ ನ್ಯಾಯಾಲಯಗಳಲ್ಲಿ ತನ್ನನ್ನು ರಕ್ಷಿಸಿಕೊಳ್ಳಲು ನನ್ನ ಮಗನಿಗೆ ಸರಿಯಾದ ಕಾನೂನು ನೆರವು ಕೂಡ ಒದಗಿಸಿಲ್ಲ’ ಎಂದು ಎಂದು ಶಾಹುಬನಾಥ್ ಬೀವಿ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
‘ಜೈಲಿನಲ್ಲಿ ನನ್ನ ಮಗನಿಗೆ ಹಿಂಸೆ ಮತ್ತು ಕಿರುಕುಳವನ್ನು ನೀಡಲಾಗುತ್ತಿದೆ’ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.