ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಣೆ ನಿರ್ವಹಿಸಿ, ಇಲ್ಲ ದಾರಿ ಬಿಡಿ’: ಖರ್ಗೆ ಎಚ್ಚರಿಕೆ

ಕಾಂಗ್ರೆಸ್‌ ಚಾಲನಾ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಖರ್ಗೆ ಎಚ್ಚರಿಕೆ
Last Updated 4 ಡಿಸೆಂಬರ್ 2022, 20:24 IST
ಅಕ್ಷರ ಗಾತ್ರ

ನವದೆಹಲಿ: ‘ಪಕ್ಷದ ಕೆಲಸ ನಿರ್ಲಕ್ಷಿಸುವವರು ಅಥವಾ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲರಾದವರು ಹುದ್ದೆ ತ್ಯಜಿಸಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಎಚ್ಚರಿಕೆ ನೀಡಿದರು.

ಪಕ್ಷದ ಅಧ್ಯಕ್ಷರಾದ ನಂತರ, ಭಾನುವಾರ ಇಲ್ಲಿ ನಡೆದ ಕಾಂಗ್ರೆಸ್‌ ಚಾಲನಾ ಸಮಿತಿಯ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ‘ಪಕ್ಷ ಸಂಘಟನೆ ಬಲಪಡಿಸುವ ಸಲುವಾಗಿ ಉನ್ನತ ಮಟ್ಟದಿಂದ ಕೆಳಹಂತದವ
ರೆಗೂ ಉತ್ತರದಾಯಿತ್ವ ಅಗತ್ಯ’ ಎಂದು ಪ್ರತಿಪಾದಿಸಿದರು.

‘ಪಕ್ಷ ಸಂಘಟನೆ ಮಾಡಿದರೂ ಬಂತು, ಮಾಡದಿದ್ದರೂ ಆಯಿತು. ವರಿಷ್ಠರು ಇದನ್ನೆಲ್ಲಾ ಗಮನಿಸುವು
ದಿಲ್ಲ ಎಂಬ ಮನೋಭಾವ ಕೆಲವರಲ್ಲಿದೆ. ಇಂಥ ಜಾಯಮಾನ ಸರಿ ಅಲ್ಲ ಹಾಗೂ ಒಪ್ಪವಂಥದ್ದೂ ಅಲ್ಲ. ಕೊಟ್ಟ ಕೆಲಸವನ್ನು ಮಾಡಲಾಗದವರು ಹೊಸಬರಿಗೆ ದಾರಿ ಮಾಡಿಕೊಡಬೇಕು’ ಎಂದು ಅವರು ತೀಕ್ಷ್ಣವಾಗಿ ಹೇಳಿದರು.

‘ಕಾಂಗ್ರೆಸ್‌ ಪಕ್ಷದ ಸಂಘಟನೆ ಪ್ರಬಲವಾಗಿ, ಉತ್ತರದಾಯಿತ್ವ ಹೊಂದಿದಾಗ ಮಾತ್ರ ಮುಂಬರುವ ಚುನಾವಣೆಗಳಲ್ಲಿ ಗೆದ್ದು, ಜನರ ಹಾಗೂ ದೇಶದ ಸೇವೆ ಮಾಡಲು ಸಾಧ್ಯವಾಗುತ್ತದೆ. ಜನಪರ ವಿಷಯಗಳನ್ನು ಮುಂದಿಟ್ಟುಕೊಂಡು 30 ರಿಂದ 90 ದಿನಗಳ ಕಾಲ ಹೋರಾಟ ನಡೆಸಬೇಕು. ಈ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಬೇಕು’ ಎಂದು ಅವರು ರಾಜ್ಯಗಳ ಉಸ್ತುವಾರಿಗಳಿಗೆ ಸೂಚಿಸಿದರು.

‘ನೀಲನಕ್ಷೆ ಸಿದ್ಧಪಡಿಸಿ’: ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. 2024ರ ಲೋಕಸಭಾ ಚುನಾವಣೆಯನ್ನು ಗಮನ
ದಲ್ಲಿಟ್ಟುಕೊಂಡು, ನೀಲನಕ್ಷೆಯನ್ನು ಸಿದ್ಧಪಡಿಸಬೇಕು ಎಂದು ಖರ್ಗೆ ಸೂಚಿಸಿದರು.

‘ಪ್ರಧಾನ ಕಾರ್ಯದರ್ಶಿಗಳುಹಾಗೂ ಉಸ್ತುವಾರಿಗಳು ಸಂಬಂಧಪಟ್ಟ ರಾಜ್ಯಗಳಿಗೆ ತಿಂಗಳಲ್ಲಿ ಕನಿಷ್ಠ 10 ದಿನಗಳ ಮಟ್ಟಿಗಾದರೂ ಭೇಟಿ ನೀಡಿದ್ದೀರಾ? ಪ್ರತಿ ಜಿಲ್ಲೆ ಮತ್ತು ಇತರ ಘಟಕಗಳೊಂದಿಗೆ ಸಂಪರ್ಕದ
ಲ್ಲಿದ್ದು, ಕ್ಷೇತ್ರಗಳಿಗೆ ಸಂಬಂಧಿಸಿ ವಸ್ತುಸ್ಥಿತಿ ತಿಳಿಯಲು ಪ್ರಯತ್ನಿಸಿದ್ದೀರಾ’ ಎಂದು ಪ್ರಶ್ನಿಸಿದರು.

‘ಮುಂದಿನ ವರ್ಷ ಹಾಗೂ 2024ರಲ್ಲಿ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಸಂಬಂಧಪಟ್ಟ ಘಟಕಗಳು ಮಾಡಿಕೊಂಡಿರುವ ಸಿದ್ಧತೆಗಳೇನು’ ಎಂದು ಅವರು ಕೇಳಿದರು.

‘ರಾಜ್ಯ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪಕ್ಷದ ಶಾಸಕರು ಮತ್ತು ಸಂಸದರು ಈ ಎಲ್ಲ ಸಂಗತಿಗಳಿಗೆ ಸಂಬಂಧಿಸಿ ನೀಲನಕ್ಷೆಯೊಂದನ್ನು ಸಿದ್ಧಪಡಿಸದಿದ್ದರೆ, ಅವುಗಳನ್ನು ತಳಮಟ್ಟದಲ್ಲಿ ಅನುಷ್ಠಾನಕ್ಕೆ ತರದಿದ್ದಲ್ಲಿ ವಹಿಸಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ’ ಎಂದೂ ಎಚ್ಚರಿಸಿದರು.

‘ದೇಶದಲ್ಲಿ ದಲಿತರು, ಬುಡಕಟ್ಟು ಜನರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ತುಳಿತಕ್ಕೆ ಒಳಗಾದ
ವರಲ್ಲಿ ಅಭದ್ರತೆ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ಹಕ್ಕುಗಳನ್ನು ದಮನ ಮಾಡುತ್ತಿದೆ. ಅವುಗಳ ರಕ್ಷಣೆಗಾಗಿ ಹೋರಾಟ ನಡೆಸುವುದು ಕಾಂಗ್ರೆಸ್‌ನ ಜವಾಬ್ದಾರಿ’ ಎಂದರು.

‘ಚೀನಾ ನಮ್ಮ ಭೂಪ್ರದೇಶವನ್ನು ಆಕ್ರಮಿಸಲು ಯತ್ನಿಸುತ್ತಿದೆ. ಆಕ್ರಮಿತ ಪ್ರದೇಶಗಳಲ್ಲಿ ನಿತ್ಯವೂ ಸೇನೆಯ ಹೊಸ ನೆಲೆಗಳನ್ನು ಸ್ಥಾಪಿಸುತ್ತಿದೆ. ಆದರೆ, ಈ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರ ಮಾತ್ರ ಮೌನವಾಗಿದೆ. ಇದು ದೇಶದ ಸಮಗ್ರತೆಯ ಮೇಲಿನ ದಾಳಿ’ ಎಂದು ಖರ್ಗೆ ಹೇಳಿದರು.

ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಹಿರಿಯ ನಾಯಕರು ಪಾಲ್ಗೊಂಡಿದ್ದರು.

‘ಜ.26ರಿಂದ ಅಭಿಯಾನ’: ‘ಭಾರತ್‌ ಜೋಡೊ ಯಾತ್ರೆಯ ಮುಂದುವರಿದ ಭಾಗವಾಗಿ ಜನವರಿ 26ರಿಂದ ಎರಡು ತಿಂಗಳ ಕಾಲ ‘ಹಾಥ್‌ ಸೆ ಹಾಥ್‌ ಜೋಡೊ ಅಭಿಯಾನ್’ ನಡೆಸಲು ಚಾಲನಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಅಭಿಯಾನದ ಅಂಗವಾಗಿ ಎಲ್ಲ ರಾಜ್ಯಗಳಲ್ಲಿ ಪಕ್ಷದ ವತಿಯಿಂದ ‘ಮಹಿಳೆಯರ ನಡಿಗೆ’ಯನ್ನು ಸಹ ಹಮ್ಮಿಕೊಳ್ಳಲು ಸಭೆ ನಿರ್ಧರಿಸಿತು.

ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ‘ಮಹಿಳೆಯರ ನಡಿಗೆ’ಯಲ್ಲಿ ಪಾಲ್ಗೊಳ್ಳುವರು.

ಫೆಬ್ರುವರಿಯಲ್ಲಿ ಸರ್ವಸದಸ್ಯರ ಅಧಿವೇಶನ

ಛತ್ತೀಸಗಡ ರಾಜಧಾನಿ ರಾಯಪುರದಲ್ಲಿ ಫೆಬ್ರುವರಿ ಮೂರನೇ ವಾರದಲ್ಲಿ ಕಾಂಗ್ರೆಸ್‌ನ 85ನೇ ಸರ್ವಸದಸ್ಯರ ಅಧಿವೇಶನವನ್ನು ಆಯೋಜಿಸಲು ಚಾಲನಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ‘ಈ ಅಧಿವೇಶನದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ನಂತರ ಬೃಹತ್‌ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗುವುದು’ ಎಂದರು.

ಈ ಅಧಿವೇಶನವು ಫೆಬ್ರುವರಿ 20ರಿಂದ 25ರ ನಡುವೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

‘ಕನ್ಯಾಕುಮಾರಿಯಿಂದ ಆರಂಭವಾಗಿರುವ ಭಾರತ್‌ ಜೋಡೊ ಯಾತ್ರೆಯನ್ನು ಜನವರಿ 26ರಂದು ಶ್ರೀನಗರದಲ್ಲಿ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದೆ. ಯಾತ್ರೆಯು ಡಿ. 24ರಂದು ದೆಹಲಿ ಪ್ರವೇಶಿಸಲಿದೆ’ ಎಂದು ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್‌ ರಮೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT