ಪಟ್ನಾ: ದೇಶದಲ್ಲಿ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಅನ್ನೇ ರಾಷ್ಟ್ರೀಯ ಮಟ್ಟದಲ್ಲಿ ಪರ್ಯಾಯ ಎಂದು ಪರಿಗಣಿಸುವುದಾಗಿ ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಹೇಳಿದ್ದಾರೆ.
ಮೂರು ವರ್ಷಗಳ ನಂತರ ಬಿಹಾರದ ತನ್ನ ತವರಿಗೆ ಮರಳಿರುವ ಲಾಲು ಪ್ರಸಾದ್ ಅವರು, ದೇಶಕ್ಕೆ ಕಾಂಗ್ರೆಸ್ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಅಲ್ಲದೆ ಆ ರಾಷ್ಟ್ರೀಯ ಪಕ್ಷಕ್ಕೆ ತನ್ನಷ್ಟು ‘ಸಹಾಯ’ವನ್ನು ಯಾರೂ ಮಾಡಿಲ್ಲ ಎಂದೂ ಒತ್ತಿ ಹೇಳಿದರು.
ಆರ್ಜೆಡಿ ಮತ್ತು ಕಾಂಗ್ರೆಸ್ ನಡುವೆ ಇತ್ತೀಚೆಗೆ ನಡೆದಿರುವ ಕೆಲ ಕೆಟ್ಟ ಬೆಳವಣಿಗೆಗಳಿಗೆ ಅಲ್ಪಾವಧಿಯ ನಾಯಕರು ಕಾರಣ ಎಂದು ಅವರು ದೂರಿದರು.
ತಾರಾಪುರ ಮತ್ತು ಕುಶೇಶ್ವರ ಆಸ್ಥಾನ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆರ್ಜೆಡಿ ತನ್ನ ಅಭ್ಯರ್ಥಿಗಳನ್ನು ಏಕಪಕ್ಷೀಯವಾಗಿ ಕಣಕ್ಕಿಳಿಸಿದ ನಿರ್ಧಾರದಿಂದ ಬೇಸರಗೊಂಡ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿತ್ತು.
ಬಹು ಕಾಯಿಲೆಗಳಿಂದ ಬಳಲುತ್ತಿರುವ ಲಾಲು, ಪ್ರಚಾರದ ಅಂತಿಮ ದಿನವಾದ ಬುಧವಾರ ಎರಡೂ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ‘ಅಲ್ಲಿ ನನ್ನ ಮಗ ತೇಜಸ್ವಿ ಅದ್ಭುತ ಕೆಲಸ ಮಾಡಿದ್ದಾನೆ. ನಾನು ಅಂತಿಮ ಸ್ಪರ್ಶ ನೀಡುತ್ತೇನೆ’ ಎಂದು ಲಾಲು ಹೇಳಿದ್ದಾರೆ.