ಬಿಹಾರ: ತೇಜಸ್ವಿ-ಚಿರಾಗ್ ಮೈತ್ರಿ ಬೆಂಬಲಿಸಿದ ಲಾಲು ಪ್ರಸಾದ್ ಯಾದವ್

ಪಟನಾ: ಬಿಹಾರದಲ್ಲಿ ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಜೊತೆ ತಮ್ಮ ಮಗ ತೇಜಸ್ವಿ ಯಾದವ್ ಮೈತ್ರಿ ಮಾಡಿಕೊಂಡಿದ್ದನ್ನು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬೆಂಬಲಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ಪಶುಪತಿ ಕುಮಾರ್ ಪರಾಸ್ ನೇತೃತ್ವದ ಎಲ್ಜೆಪಿಯ ಐವರು ಸಂಸದರು ಪಕ್ಷದ ವಿರುದ್ಧ ಬಂಡಾಯವೆದ್ದಿರುವ ನಡುವೆ, ಚಿರಾಗ್ ಅವರನ್ನು ಎಲ್ಜೆಪಿ ಮುಖಂಡ ಎಂದು ಕರೆದಿರುವ ಲಾಲು ಪ್ರಸಾದ್, 'ಅವರ ಪಕ್ಷದಲ್ಲಿ ಏನೇ ನಡೆಯುತ್ತಿದ್ದರು ಚಿರಾಗ್ ಪಾಸ್ವಾನ್ ಎಲ್ಜೆಪಿ ನಾಯಕ' ಎಂದು ಉಲ್ಲೇಖಿಸಿದ್ದಾರೆ.
'ಹೌದು, ಅವರಿಬ್ಬರು ಜೊತೆಯಾಗಿ ಇರಬೇಕು' ಎಂದು ತೇಜಸ್ವಿ ಮತ್ತು ಚಿರಾಗ್ ಅವರನ್ನು ಉದ್ದೇಶಿಸಿ ಲಾಲು ಪ್ರಸಾದ್ ಯಾದವ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದ ಲಾಲು ಪ್ರಸಾದ್, 'ಕಳೆದ ವರ್ಷನಾವು ಬಿಹಾರದಲ್ಲಿ ಸರ್ಕಾರ ರಚಿಸುವ ಹಂತದಲ್ಲಿದ್ದೆವು. ನಾನು ಜೈಲಿನಲ್ಲಿದ್ದೆ. ನನ್ನ ಮಗ ತೇಜಸ್ವಿ ಯಾದವ್ ಅವರ ವಿರುದ್ಧ(ಈಗಿನ ಮೈತ್ರಿ ಸರ್ಕಾರ) ಒಬ್ಬಂಟಿಯಾಗಿ ಹೋರಾಟ ನಡೆಸಿದ. ಅವರು ಮೋಸ ಮಾಡಿದರು. ನಮ್ಮನ್ನು 10-15 ಮತಗಳಿಂದ ಸೋಲುವಂತೆ ಮಾಡಿದರು' ಎಂದು ಆರೋಪಿಸಿದ್ದಾರೆ.
ಮೇಕೆದಾಟು: ಸಣ್ಣಪ್ರಮಾಣದ ಅಣೆಕಟ್ಟೆಗಳ ನಿರ್ಮಾಣ ಸ್ವಾಗತಾರ್ಹ, ಸದ್ಗುರು
ಅನಾರೋಗ್ಯದಿಂದ ಚೇತರಿಸಿಕೊಂಡ ಶರದ್ ಯಾದವ್ ಅವರನ್ನು ಭೇಟಿ ಮಾಡಿದ ಲಾಲು ಪ್ರಸಾದ್ ಸುಮಾರು ಒಂದು ಗಂಟೆ ವರೆಗೆ ಚರ್ಚೆ ನಡೆಸಿದ್ದಾರೆ. ನಂತರ ಮಾಧ್ಯಮದ ಜೊತೆ ಮಾತನಾಡಿದ ಲಾಲು ಪ್ರಸಾದ್, 'ಸಂಸತ್ತಿನಲ್ಲಿ ಶರದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತು ನನ್ನಂತಹ ಸಮಾಜವಾದಿ ನಾಯಕರು ಇಲ್ಲದಿರುವುದರಿಂದ ಜನರಿಗೆ ಸಂಬಂಧಿಸಿದ ಚರ್ಚೆಗಳನ್ನು ಕಡೆಗಣಿಸಲಾಗುತ್ತಿದೆ' ಎಂದರು.
ಪೆಗಾಸಸ್ ಗೂಢಚರ್ಯೆ ವಿಚಾರಕ್ಕೆ ಸಂಬಂಧಿಸಿ, ಇದರಲ್ಲಿ ಭಾಗಿಯಾದವರ ಹೆಸರನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.
ಸೋಮವಾರ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಮಗ ಅಖಿಲೇಶ್ ಯಾದವ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದರು. ನಂತರ ಭೇಟಿಯ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡ ಲಾಲು ಪ್ರಸಾದ್, ಇಂದು ರಾಷ್ಟ್ರಕ್ಕೆ ಬೇಕಿರುವುದು ಸಮಾನತೆ ಮತ್ತು ಸಮಾಜವಾದ. ಕೋಮುವಾದ ಮತ್ತು ಬಂಡವಾಳಶಾಹಿ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.