ಪಾಟ್ನಾ: ಸಿಂಗಪುರ ಆಸ್ಪತ್ರೆಯಲ್ಲಿ ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರಿಗೆ ನಡೆದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಅವರ ಮಗ, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ಧಾರೆ.
ನನ್ನ ತಂದೆ ಮತ್ತು ಅವರಿಗೆ ಮೂತ್ರಪಿಂಡ ದಾನ ಮಾಡಿದ ಅಕ್ಕ ರೋಹಿಣಿ ಆಚಾರ್ಯ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತೇಜಸ್ವಿ ತಿಳಿಸಿದ್ದಾರೆ.
‘ಯಶಸ್ವಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಬಳಿಕ ಅಪ್ಪನನ್ನು ಆಪರೇಶನ್ ಥಿಯೇಟರ್ನಿಂದ ಐಸಿಯುಗೆ ಸ್ಥಳಾಂತರಿಸಲಾಗಿದೆ. ಕಿಡ್ನಿ ದಾನ ಮಾಡಿದ ನನ್ನ ಅಕ್ಕ ರೋಹಿಣಿ ಆಚಾರ್ಯ ಮತ್ತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಲೂಲೂ ಪ್ರಸಾದ್ ಯಾದವ್ ಅವರು ಆರೋಗ್ಯವಾಗಿದ್ದಾರೆ. ಅವರಿಗಾಗಿ ಪ್ರಾರ್ಥಿಸಿದ ಮತ್ತು ಹಾರೈಸಿದ ಎಲ್ಲರಿಗೂ ಧನ್ಯವಾದ’ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಮೇವು ಹಗರಣದ ಹಲವು ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವಲಾಲು ಪ್ರಸಾದ್ ಯಾದವ್ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ನ್ಯಾಯಾಲಯವು ಜಾಮೀನು ನೀಡಿತ್ತು.
ಲಾಲು ಚೇತರಿಕೆಗಾಗಿ ಬಿಹಾರದ ಹಲವೆಡೆ ಅಭಿಮಾನಿಗಳು ಪ್ರಾರ್ಥನೆಗಳನ್ನು ಸಲ್ಲಿಸಿದ್ಧಾರೆ. ಪಾಟ್ನಾದ ದೇಗುಲಗಳಲ್ಲಿ ಹೋಮ ಹವನ, ಮಹಾಮೃತ್ಯುಂಜಯ ಜಪ ಸಹ ನಡೆಸಲಾಗಿದೆ. ಅಲ್ಲದೆ ಇಲ್ಲಿನ ಸೂಫಿ ಮಂದಿರದಲ್ಲೂ ಆರ್ಜೆಡಿ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದ್ಧಾರೆ.