ನವದೆಹಲಿ: ‘ಜೀವ ಅಪಾಯದಲ್ಲಿದೆ. ದೊಡ್ಡ ದುರಂತವೇ ಸಂಭವಿಸಬಹುದು’. ಹೀಗೆಂದು, ದೆಹಲಿಯ ಎರಡು ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕದ ಅಭಾವ ಕುರಿತಂತೆ ಎಚ್ಚರಿಕೆಯ ಸಂದೇಶವನ್ನು ಆಡಳಿತಕ್ಕೆ ಭಾನುವಾರ ರವಾನಿಸಿವೆ.
ಮಧುಕರ್ ರೇನ್ಬೋ ಮಕ್ಕಳ ಆಸ್ಪತ್ರೆಯ ಅಧಿಕಾರಿಯೊಬ್ಬರು ಭಾನುವಾರ ಮಧ್ಯಾಹ್ನ ಆಕ್ಸಿಜನ್ ಕೊರತೆ ಮಾಹಿತಿ ನೀಡಿದ್ದು, ‘ಇಲ್ಲಿ ನಾಲ್ಕು ಶಿಶುಗಳು ಸೇರಿದಂತೆ 50 ಜನರು ಆಕ್ಸಿಜನ್ ಅವಲಂಭಿಸಿದ್ದಾರೆ. ಅವರ ಜೀವ ಅಪಾಯದಲ್ಲಿದೆ’ ಎಂದಿದ್ದಾರೆ.
ಆಸ್ಪತ್ರೆಯಲ್ಲಿ ಒಟ್ಟಾರೆ 80 ರೋಗಿಗಳು ಇದ್ದಾರೆ. ಇವರಲ್ಲಿ ಕೋವಿಡ್ನಿಂದ ಬಳಲುತ್ತಿರುವವರು ಹಾಗೂ 15 ನವಜಾತ ಶಿಶುಗಳು ಕೂಡಾ ಸೇರಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಆಸ್ಪತ್ರೆಯಲ್ಲಿ ದ್ರವೀಕೃತ ವೈದ್ಯಕೀಯ ಆಕ್ಸಿಜನ್ನ ದಾಸ್ತಾನು ಸೌಲಭ್ಯವಿಲ್ಲ. ಪೂರ್ಣವಾಗಿ ಖಾಸಗಿಯವರು ಪೂರೈಸುವ ಆಕ್ಸಿಜನ್ ಸಿಲಿಂಡರ್ಗಳನ್ನೇ ಅವಲಂಬಿಸಬೇಕಾಗಿದೆ. ಸರಬರಾಜು ವ್ಯತ್ಯಯದಿಂದಾಗಿ ನಿತ್ಯ ಬವಣೆಯಾಗಿದೆ. ಆಸ್ಪತ್ರೆಗೆ ನಿತ್ಯ ಕನಿಷ್ಠ 125 ಆಕ್ಸಿಜನ್ ಸಿಲಿಂಡರ್ಗಳ ಅಗತ್ಯವಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳ ಗಮನವನ್ನು ಸೆಳೆಯಲು ಆಸ್ಪತ್ರೆಯು ಈ ಕುರಿತು ಟ್ವೀಟ್ ಕೂಡಾ ಮಾಡಿದೆ. ಟ್ವೀಟ್ಗೆ ಪ್ರತಿಕ್ರಿಯಿಸಿರುವ ಆಪ್ ಶಾಸಕ ರಾಘವ್ ಛಾದಾ, ‘ನಾವು ಐದು ಡಿ ಮಾದರಿಯ ಆಕ್ಸಿಜನ್ ಸಿಲಿಂಡರ್ಗಳನ್ನು ವ್ಯವಸ್ಥೆ ಮಾಡಿದ್ದೇವೆ. ಸರ್ಕಾರದ ಆಮ್ಲಜನಕ ಮೀಸಲು ಪ್ರಮಾಣ ಕಡಿಮೆ ಇದ್ದು, ಪೂರೈಕೆಯೂ ಕಡಿಮೆ ಆಗಿದೆ’ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಟ್ರಿಟೊನ್ ಆಸ್ಪತ್ರೆಯ ಡಾ. ದೀಪಾಲಿ ಗುಪ್ತಾ ಅವರು, ‘ತೀವ್ರ ನಿಗಾ ಘಟಕಕ್ಕೆ ಆಕ್ಸಿಜನ್ ಪೂರೈಕೆಯ ವ್ಯವಸ್ಥೆ ಮಾಡಲು ಇನ್ನಿಲ್ಲದ ಸಮಸ್ಯೆಯಾಗುತ್ತಿದೆ’ ಎಂದು ಹೇಳಿದ್ದಾರೆ. ‘ಒಂದು ವಾರದಿಂದ ಕಷ್ಟ ಪಡುತ್ತಿದ್ದೇವೆ. ಆಕ್ಸಿಜನ್ ಸಿಲಿಂಡರ್ಗಳ ಪೂರೈಕೆ ಖಾತರಿ ಸಿಗದಿದ್ದರೆ ದೊಡ್ಡ ದುರಂತವೇ ಸಂಭವಿಸಬಹುದು’ ಎಂದು ಅವರು ಹೇಳಿದ್ದರು.
ಈ ಆಸ್ಪತ್ರೆಗೂ ಐದು 2 ಮಾದರಿ ಸಿಲಿಂಡರ್ಗಳ ವ್ಯವಸ್ಥೆ ಮಾಡಿದ್ದು, ಆಸ್ಪತ್ರೆ ಸಿಬ್ಬಂದಿ ಇವುಗಳನ್ನು ಪಡೆಯಲು ಬರುತ್ತಿದ್ದಾರೆ. ಶೀಘ್ರ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ದೆಹಲಿಯಲ್ಲಿರುವ ಬಾತ್ರಾ ಆಸ್ಪತ್ರೆಯಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆಯಿಂದಾಗಿಶನಿವಾರ ಹಿರಿಯ ವೈದ್ಯರೊಬ್ಬರು ಸೇರಿದಂತೆ 12 ಕೋವಿಡ್ ರೋಗಿಗಳು ಅಸುನೀಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.