ಮುಂಬೈ: ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರು ತಮ್ಮ ವಿರುದ್ಧ ದುರುದ್ದೇಶಪೂರಿತ ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರದ ಸಚಿವ ಅನಿಲ್ ಪರಬ್ ಅವರು, ಮಂಗಳವಾರ ಬಾಂಬೆ ಹೈಕೋರ್ಟ್ನಲ್ಲಿ ಕಿರೀಟ್ ಅವರ ವಿರುದ್ಧ ₹100 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಶಿವಸೇನಾದ ಮುಖಂಡರೂ ಆಗಿರುವ ಅನಿಲ್ ಅವರು, ಕಿರೀಟ್ ಬೇಷರತ್ ಕ್ಷಮೆಯಾಚಿಸುವಂತೆ ನಿರ್ದೇಶನ ನೀಡಬೇಕೆಂದೂ ನ್ಯಾಯಾಲಯಕ್ಕೆ ಕೋರಿದ್ದಾರೆ.
ಅಗ್ಗದ ಪ್ರಚಾರ ಬಯಸುತ್ತಿರುವ ಕಿರೀಟ್ ಅವರ ಹೇಳಿಕೆಯಿಂದಾಗಿ ತಮ್ಮ ವರ್ಚಸ್ಸಿಗೆ ಧಕ್ಕೆ ಬಂದಿದೆ. ಭವಿಷ್ಯದಲ್ಲಿ ಅವರು ತಮ್ಮ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಅಥವಾ ಪ್ರಕಟಿಸದಂತೆಯೂಅನಿಲ್, ನ್ಯಾಯಾಲಯದ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
‘ರತ್ನಗಿರಿ ಜಿಲ್ಲೆಯ ದಾಪೋಲಿಯಲ್ಲಿನ ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದ ಹಗರಣವೊಂದರಲ್ಲಿ ನನ್ನ ವಿರುದ್ಧ ಕಿರೀಟ್ ಆರೋಪ ಮಾಡಿದ್ದಾರೆ. ಅಲ್ಲದೇ, ಈ ಕುರಿತು 2021ರ ಮೇ ತಿಂಗಳಿನಿಂದ ನನ್ನ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ನಿರಂತರ ಆರೋಪಗಳ ಅಭಿಯಾನವನ್ನೂ ಮಾಡಿದ್ದಾರೆ’ ಎಂದು ಅನಿಲ್ ಪರಬ್ ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.