ನವದೆಹಲಿ/ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಾರಿಗೆ ಸಚಿವ ಅನಿಲ್ ಪರಬ್ ಮತ್ತು ಇತರರ ಮನೆ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿರುವ ದಾಪೋಲಿಯಲ್ಲಿ ಭೂ ವ್ಯವಹಾರದಲ್ಲಿ ಅಕ್ರಮ ಮತ್ತು ಇತರ ಆರೋಪಗಳಿಗೆ ಸಂಬಂಧಿಸಿ ಹಣ ಅಕ್ರಮ ತಡೆ ಕಾಯ್ದೆ (ಪಿಎಂಎಲ್ಎ)ಯ ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ಸಚಿವರು ಮತ್ತು ಇತರರ ವಿರುದ್ಧ ಇ.ಡಿ ಹೊಸ ಪ್ರಕರಣವನ್ನು ದಾಖಲಿಸಿದೆ. ಇದಕ್ಕೆ ಸಂಬಂಧಿಸಿ ಈ ದಾಳಿ ನಡೆಸಲಾಗಿದೆ.
ಮುಂಬೈನಲ್ಲಿರುವ ಪರಬ್ ಅಧಿಕೃತ ನಿವಾಸ ಸೇರಿದಂತೆ ದಾಪೋಲಿ, ಪುಣೆಯಲ್ಲಿ ಏಳು ಸ್ಥಳಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಭದ್ರತೆ ಪಡೆದು ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಪರಬ್ ಅವರು 2017 ರಲ್ಲಿ ₹ 1 ಕೋಟಿ ಮೌಲ್ಯದ ಭೂಮಿಯನ್ನು ದಾಪೋಲಿಯಲ್ಲಿ ಖರೀದಿಸಿ, 2019ರಲ್ಲಿ ಅದನ್ನು ನೋಂದಾಯಿಸಿದ್ದರು. ನಂತರ ಈ ಭೂಮಿಯನ್ನು ಮುಂಬೈ ಮೂಲದ ಕೇಬಲ್ ಆಪರೇಟರ್ ಸದಾನಂದ್ ಕದಮ್ ಅವರಿಗೆ 2020 ರಲ್ಲಿ ₹ 1.10 ಕೋಟಿಗೆ ಮಾರಾಟ ಮಾಡಲಾಗಿದೆ. ಈ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಇ.ಡಿ ಆರೋಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.