ನವದೆಹಲಿ: ಶಿವಸೇನಾ ಮತ್ತು ಅದರ ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಗಳಲ್ಲಿ ಪಕ್ಷಾಂತರ, ವಿಲೀನ ಮತ್ತು ಅನರ್ಹತೆಗೆ ಸಂಬಂಧಿಸಿದಂತೆ ಹಲವು ಸಾಂವಿಧಾನಿಕ ಪ್ರಶ್ನೆಗಳು ಇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಾಂವಿಧಾನಿಕ ಪ್ರಶ್ನೆಗಳು ಇರುವುದರಿಂದ ವಿಚಾರಣೆಯು ಹೆಚ್ಚು ನ್ಯಾಯಮೂರ್ತಿಗಳಿರುವ ವಿಸ್ತೃತ ಪೀಠದಲ್ಲಿ ನಡೆಯುವುದು ಸೂಕ್ತ ಎಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
ವಿಸ್ತೃತ ಪೀಠದಲ್ಲಿ ಈ ವಿಷಯಗಳ ವಿಚಾರಣೆ ಆಗಬೇಕು ಎಂಬುದಕ್ಕೆ ಪೂರಕವಾಗಿ ವಿಷಯಗಳನ್ನು ರೂಪಿಸಿ ಇದೇ 27ರೊಳಗೆ ಸಲ್ಲಿಸುವಂತೆ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಅವರ ಪೀಠವು ಕಕ್ಷಿದಾರರಿಗೆ ನಿರ್ದೇಶಿಸಿತು.
‘ಕಕ್ಷಿದಾರರ ಪರ ವಕೀಲರ ವಾದಗಳನ್ನು ಆಲಿಸಿದ ನ್ಯಾಯಪೀಠವು, ಈ ವಿಷಯಗಳನ್ನು ವಿಸ್ತೃತ ಪೀಠಕ್ಕೆ ರವಾನಿಸುವುದು ಸೂಕ್ತ. ಅದಕ್ಕೆ ಪೂರಕವಾಗಿ ವಿಷಯಗಳನ್ನು ಸಿದ್ಧಪಡಿಸಿ ಮುಂದಿನ ಬುಧವಾರದೊಳಗೆ ಸಲ್ಲಿಸಿ. ಈ ಕುರಿತ ವಿಚಾರಣೆಯನ್ನು ಆಗಸ್ಟ್ 1 ರಂದು ನಡೆಸಲಾಗುವುದು’ ಎಂದು ಪೀಠ ಹೇಳಿತು.
ಮಹಾರಾಷ್ಟ್ರ ರಾಜ್ಯದಲ್ಲಿನ ಮಹಾರಾಷ್ಟ್ರ ವಿಕಾಸ ಆಘಾಡಿ (ಎಂವಿಎ) ಸರ್ಕಾರದ ಪತನ ಹಾಗೂ ಅದಕ್ಕೆ ಸಂಬಂಧಿಸಿದ ರಾಜಕೀಯ ಬಿಕ್ಕಟ್ಟಿನ ಕುರಿತು ನ್ಯಾಯಪೀಠದಲ್ಲಿ ಐದು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.
ಶಿವಸೇನಾದ ಉದ್ಧವ್ ಠಾಕ್ರೆ ಬಣದ ಪರ ವಕೀಲ ಕಪಿಲ್ ಸಿಬಲ್, ಶಿವಸೇನಾದ ಮಾಜಿ ಮುಖ್ಯ ಸಚೇತಕ ಸುನಿಲ್ ಪ್ರಭು ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಾಡಿದರು.