ಮುಂಬೈ: ಶುಕ್ರವಾರ ನಡೆದ ಸಮಾರಂಭವೊಂದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆಯು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಔರಂಗಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ರಾವ್ಸಾಹೇಬ್ ದಾನವೆ ಅವರನ್ನು 'ಭವಿಷ್ಯದ ಸ್ನೇಹಿತ' ಎಂದು ಕರೆಯುವ ಮೂಲಕ ಉದ್ಧವ್ ಠಾಕ್ರೆ ಅಚ್ಚರಿ ಮೂಡಿಸಿದ್ದಾರೆ.
ವೇದಿಕೆ ಮೇಲಿದ್ದ ದಾನವೆ ಅವರನ್ನು ಭಾಷಣದ ಆರಂಭದಲ್ಲಿ ಉಲ್ಲೇಖಿಸಿದ ಉದ್ಧವ್, 'ನನ್ನ ಮಾಜಿ ಸ್ನೇಹಿತ, ನಾವು ಮತ್ತೊಮ್ಮೆ ಒಂದಾದರೆ ಭವಿಷ್ಯದ ಸ್ನೇಹಿತ' ಎಂದು ಕರೆದಿದ್ದಾರೆ.
'ಆ ಒಂದು ಕಾರಣಕ್ಕಾಗಿ ನನಗೆ ರೈಲ್ವೆ ಎಂದರೆ ಇಷ್ಟವಾಗುತ್ತದೆ. ನೀವು ಹಳಿಗಳನ್ನು ತೊರೆದು ದಿಕ್ಕನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ತಿರುವು ಬಂದಾಗ ನೀವು ನಮ್ಮ ನಿಲ್ದಾಣಕ್ಕೆ ಬರಬಹುದು. ಇಷ್ಟಾದರೂ ಎಂಜಿನ್ ಮಾತ್ರ ಹಳಿಗಳನ್ನು ಬಿಡುವುದಿಲ್ಲ' ಎಂದು ಉದ್ಧವ್ ಮಾರ್ಮಿಕವಾಗಿ ನುಡಿದಿದ್ದಾರೆ.
ರಾವ್ಸಾಹೇಬ್ ದಾನವೆ ಅವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.