ಆಲಿಪುರದ್ವಾರ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಕೆಲವು ಬಿಜೆಪಿ ನಾಯಕರು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆಯಿಟ್ಟುರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ರಕ್ತವನ್ನು ಹರಿಸಲು ಸಿದ್ಧನಿದ್ದೇನೆ, ಆದರೆ ರಾಜ್ಯವನ್ನು ವಿಭಜಿಸಲು ಬಿಡುವುದಿಲ್ಲ' ಎಂದಿದ್ದಾರೆ.
'2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ರಾಜ್ಯವನ್ನು ಒಡೆಯುವ ಪ್ರಯತ್ನಗಳಿಗೆ ಬಿಜೆಪಿ ಕೈಹಾಕಿದೆ. ದಶಕಗಳಿಂದ ಉತ್ತರ ಬಂಗಾಳದ ಎಲ್ಲ ಸಮುದಾಯಗಳ ಜೊತೆ ರಾಜ್ಯದಾದ್ಯಂತ ಉತ್ತಮ ಬಾಂಧವ್ಯವಿದೆ' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
'ರಾಜ್ಯವನ್ನು ಒಡೆಯುವ ದೃಷ್ಟಿಯಿಂದ ಕೆಲವು ಸಂದರ್ಭ ಗೋರ್ಖಾಲ್ಯಾಂಡ್ನತ್ತ, ಇನ್ನು ಕೆಲವು ಸಂದರ್ಭ ಉತ್ತರ ಬಂಗಾಳದತ್ತ ಬಿಜೆಪಿ ನೋಡುತ್ತಿದೆ. ನನ್ನ ರಕ್ತವನ್ನು ಕೊಡಲು ಸಿದ್ಧಳಿದ್ದೇನೆ. ಆದರೆ ರಾಜ್ಯವನ್ನು ವಿಭಜಿಸಲು ಎಂದಿಗೂ ಬಿಡುವುದಿಲ್ಲ' ಎಂದು ಮಮತಾ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ.
ಕಾಮತಾಪುರ್ ವಿಮೋಚನಾ ಸಂಘಟನೆಯ ನಾಯಕ ಜೀವನ್ ಸಿಂಗ್ ಅವರು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮಮತಾ ಬ್ಯಾನರ್ಜಿ ವಿರೋಧಿಸಿದರೆ ರಕ್ತಪಾತ ಹರಿಯಲಿದೆ ಎಂದು ಬೆದರಿಕೆ ಒಡ್ಡಿರುವ ವಿಡಿಯೊ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
'ಕೆಲವರು ನನಗೆ ಬೆದರಿಕೆ ಒಡ್ಡುತ್ತಿದ್ದಾರೆ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ' ಎಂದು ತಿಳಿಸಿದ್ದಾರೆ.