ನವದೆಹಲಿ: ಇತರರಿಗೆ ಪಾಠ ಮಾಡಲು ಮತ್ತು ಜಗತ್ತಿಗೇ ಸ್ಫೂರ್ತಿಯಾಗಲು ಕಾತರರಾಗಿರುವ ಅನೇಕ ಜನ ಭಾರತದಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ಮನದ ಮಾತು (ಮನ್ ಕಿ ಬಾತ್)' ಬಾನುಲಿ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೊರೊನಾ ಸಂದರ್ಭದಲ್ಲಿ ಖಾದಿ ಮಾಸ್ಕ್ಗಳು ಜನಪ್ರಿಯವಾಗಿವೆ. ಮೆಕ್ಸಿಕೊದ ಒಕ್ಸಾಕ ಪ್ರದೇಶದಲ್ಲಿಯೂ ಖಾದಿ ಮಾಸ್ಕ್ ತಯಾರಿಸಲಾಗುತ್ತಿದೆ. ಖಾದಿಯು ಪರಿಸರಸ್ನೇಹಿಯೂ ಶರೀರಸ್ನೇಹಿಯೂ ಆಗಿದೆ’ ಎಂದು ಹೇಳಿದ್ದಾರೆ.
ಮೋದಿ ಭಾಷಣದ ಮುಖ್ಯಾಂಶಗಳು
* ಸರ್ವರಿಗೂ ವಿಜಯ ದಶಮಿ ಹಬ್ಬದ ಶುಭಾಶಯಗಳು. ಈ ಹಬ್ಬವು ಅಸತ್ಯದ ವಿರುದ್ಧ ಸತ್ಯ, ಕೆಡುಕಿನ ವಿರುದ್ಧ ಒಳಿತು ಜಯ ಸಾಧಿಸುವಂತೆ ಮಾಡಲಿ. ಪ್ರತಿಯೊಬ್ಬರ ಬಾಳಿನಲ್ಲೂ ಸ್ಫೂರ್ತಿ ತರಲಿ.
* ದುರ್ಗಾ ಪೂಜೆಯಂತಹ ಹಬ್ಬಗಳಿಗೆ ಈ ಬಾರಿ ಕೊರೊನಾದಿಂದಾಗಿ ಅಡ್ಡಿಯಾಗಿದೆ.
* ಕೊರೊನಾ ಕಾಲದಲ್ಲಿ ನಮ್ಮ ನೆರವಿಗೆ ಬಂದ ಸ್ವಚ್ಛತಾ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರ ಕೊಡುಗೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ.
* ಗಡಿಯಲ್ಲಿರುವ ಯೋಧರಿಗಾಗಿ ನಾವು ಮನೆಯಲ್ಲಿ ದೀಪಗಳನ್ನು ಬೆಳಗಬೇಕು.
* ಮಲ್ಲಕಂಭದಂತಹ ಅನೇಕ ಭಾರತೀಯ ಕ್ರೀಡೆಗಳು ಇಂದು ವಿಶ್ವಮಟ್ಟದಲ್ಲಿ ಜನಪ್ರಿಯಗೊಂಡಿವೆ.
* ಅಂಗಡಿಯ ಒಂದು ಭಾಗವನ್ನು ಗ್ರಂಥಾಲಯ ಮಾಡಿದ ತಮಿಳುನಾಡಿನ ಪೋನ್ ಮರಿಯಪ್ಪನ್ ಅವರನ್ನು ಶ್ಲಾಘಿಸುತ್ತೇನೆ.
* ಜ್ಞಾನಕ್ಕಿಂತ ಹೆಚ್ಚು ಪರಿಶುದ್ಧವಾದುದು ಬೇರೆ ಯಾವುದೂ ಇಲ್ಲ ಎಂದು ಗೀತೆ ಹೇಳುತ್ತದೆ.
* ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗುವಾಗಲೂ ಸರ್ದಾರ್ ಪಟೇಲರು ಹಾಸ್ಯಪ್ರಜ್ಞೆ ಉಳಿಸಿಕೊಂಡಿದ್ದರು.
* ದೇಶದ ಏಕತೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಸರ್ದಾರ್ ಪಟೇಲರು.
* ಅಕ್ಟೋಬರ್ 31ರಂದು ನಾವು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರನ್ನು ಕಳೆದುಕೊಂಡಿದ್ದೆವು. ಅವರಿಗೆ ನನ್ನ ಗೌರವ ನಮನಗಳು.
* ರೈತರ ಆದಾಯ ಹೆಚ್ಚಿಸಲು ಹೊಸ ಕೃಷಿ ಮಸೂದೆಗಳು ನೆರವಾಗಲಿವೆ.
* ಮುಂಬರುವ ಹಬ್ಬಗಳಿಗೆ ಶುಭಾಶಯಗಳು. ಆದರೆ, ಕೊರೊನಾ ವೈರಸ್ ಹರಡುವಿಕೆ ತಡೆಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ಮರೆಯದಿರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.