ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಬೆಡ್‌ನಲ್ಲಿರುವ ಮನಮೋಹನ್ ಸಿಂಗ್ ಜೊತೆ ಫೋಟೊ: ಮಾಂಡವೀಯ ವಿವಾದ

Last Updated 15 ಅಕ್ಟೋಬರ್ 2021, 13:15 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರೋಗ್ಯ ವಿಚಾರಿಸಲು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಛಾಯಾಗ್ರಾಹಕರೊಂದಿಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಕುಟುಂಬದ ಇಚ್ಛೆಗೆ ವಿರುದ್ಧವಾಗಿ, ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದ ಅನಾರೋಗ್ಯ ಪೀಡಿತ ಮನಮೋಹನ್ ಸಿಂಗ್ ಅವರೊಂದಿಗೆ ಫೋಟೊ ತೆಗೆಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

89 ವರ್ಷದ ರಾಜ್ಯಸಭಾ ಸದಸ್ಯ ಸಿಂಗ್ ಅವರು, ಜ್ವರ ಮತ್ತು ಸುಸ್ತಿನಿಂದ ಬುಧವಾರ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು.

‘ಡಾ. ಮನಮೋಹನ್ ಸಿಂಗ್-ಜಿ ಅವರು ಆರೋಗ್ಯವಾಗಿದ್ದಾರೆ. ನಿನ್ನೆಗಿಂತ (ಗುರುವಾರ) ಅವರು ಉತ್ತಮವಾಗಿದ್ದಾರೆ. ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಹಾರೈಸೋಣ. ಯಾವುದೇ ಆಧಾರರಹಿತ ಊಹಾಪೋಹಕ್ಕೆ ಕಿವಿಗೊಡಬೇಡಿ. ಎಲ್ಲರೂ ಮಾಜಿ ಪ್ರಧಾನಿಯ ಆರೋಗ್ಯ ಗೌಪ್ಯತೆಯನ್ನು ಗೌರವಿಸಬೇಕು. ಧನ್ಯವಾದಗಳು!’ ಎಂದು ಎಐಸಿಸಿ ಕಾರ್ಯದರ್ಶಿ ಪ್ರಣವ್ ಜಾ ಟ್ವೀಟ್ ಮಾಡಿದ್ದಾರೆ,

ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಸಿಂಗ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ರಾಹುಲ್ ಗಾಂಧಿ ವೈದ್ಯರು ಮತ್ತು ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಅವರನ್ನು ಮಾತನಾಡಿಸಿರುವ ಛಾಯಾಚಿತ್ರಗಳು ಬಿಡುಗಡೆಯಾದ ಬೆನ್ನಲ್ಲೇ, ಮಾಂಡವಿಯಾ ಅವರು ಹಾಸಿಗೆಯ ಮೇಲೆ ಮಲಗಿರುವ ಸಿಂಗ್ ಅವರ ಜೊತೆ ಪಡೆದಿರುವ ಫೋಟೋಗಳು ಮತ್ತು ಛಾಯಾಗ್ರಾಹಕರೊಂದಿಗೆ ಆಸ್ಪತ್ರೆಗೆ ಪ್ರವೇಶಿಸಿದ ಚಿತ್ರಗಳು ವೈರಲ್ ಆಗಿದ್ದು, ವಿವಾದಕ್ಕೆ ಎಡೆಮಾಡಿದೆ.

ಏಮ್ಸ್ ಅಧ್ಯಕ್ಷರೂ ಆಗಿರುವ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಈ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಕ್ರಿಯೆ ನೀಡಿಲ್ಲ.

ಮಾಂಡವೀಯ ಅವರು ಛಾಯಾಗ್ರಾಹಕರ ಜೊತೆ ಬಂದ ಪ್ರಸಂಗದಿಂದ ಸಿಂಗ್ ಕುಟುಂಬವು ಅಸಮಾಧಾನಗೊಂಡಿದೆ. ಫೋಟೊಗ್ರಾಫರ್ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಾಗ ನನ್ನ ತಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಅದನ್ನು ‘ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ಸಿಂಗ್ ಅವರ ಮಗಳು ದಮನ್‌ದೀಪ್ ಸಿಂಗ್ ಹೇಳಿದ್ದಾರೆ.

‘ಅವರು (ಗುರುಶರಣ್ ಕೌರ್) ತುಂಬಾ ಅಸಮಾಧಾನಗೊಂಡಿದ್ದಾರೆ. ನನ್ನ ಪೋಷಕರು ಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ವಯಸ್ಸಾದವರು. ಮೃಗಾಲಯದಲ್ಲಿರುವ ಪ್ರಾಣಿಗಳಲ್ಲ’ ಎಂದು ದಮನ್‌ದೀಪ್ ಹೇಳಿದ್ಧಾರೆ.

‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರೋಗ್ಯದ ಬಗ್ಗೆ ನಿಮ್ಮೆಲ್ಲರಿಗೂ ಕಾಳಜಿ ಇದೆ ಎಂದು ನನಗೆ ತಿಳಿದಿದೆ. ಆದರೆ. ದಯವಿಟ್ಟು ಅವರು ಆಸ್ಪತ್ರೆಯ ಹಾಸಿಗೆಯಲ್ಲಿರುವ ಫೋಟೊಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿ. ಇದು ಅವರ ಮತ್ತು ಅವರ ಕುಟುಂಬದ ಗೌಪ್ಯತೆಯ ಮೇಲೆ ಆಕ್ರಮಣವಾಗಿದೆ. ಉತ್ತಮ ನಡವಳಿಕೆಯಲ್ಲ’ ಎಂದು ಹಿರಿಯ ಕಾಂಗ್ರೆಸ್ ಸಂಸದ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

ಇದು ‘ಗಂಭೀರ ಖಾಸಗಿತನದ ಉಲ್ಲಂಘನೆ’ ಎಂದು ಕಾಂಗ್ರೆಸ್ ಲೋಕಸಭಾ ಸಚೇತಕ ಮಾಣಿಕ್ಕಂ ಟಾಗೋರ್ ಟ್ವೀಟ್ ಮಾಡಿದ್ದಾರೆ. ಕೇಂದ್ರ ಆರೋಗ್ಯ ಸಚಿವರು ಕ್ಯಾಮರಾಗಳೊಂದಿಗೆ ಆಸ್ಪತ್ರೆಗೆ ಪ್ರವೇಶಿಸಿ ಫೋಟೊ ತೆಗೆದು ಅವುಗಳನ್ನು ಏಕೆ ಹರಿಬಿಟ್ಟರು ಎಂದು ಪ್ರಶ್ನಿಸಿದ್ದಾರೆ.

‘ಮಾಜಿ ಪ್ರಧಾನಿ ವಾಜಪೇಯಿ ಆಸ್ಪತ್ರೆಯಲ್ಲಿದ್ದಾಗ, ನಾವು ಏಮ್ಸ್‌ನಿಂದ ಚಿತ್ರಗಳನ್ನು ಪಡೆದುಕೊಂಡಿದ್ದೇವೆಯೇ?’ ಎಂದು ಉತ್ತರಿಸುವಂತೆ ಏಮ್ಸ್ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಈ ರೀತಿಯ ಸಣ್ಣತನದ ನಡವಳಿಕೆಗಳನ್ನು ನಿಲ್ಲಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿಗಳಿಗೆ ಸೂಚಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆಯುವುದಾಗಿ ಅವರು ಹೇಳಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT