ಶಿಲ್ಲಾಂಗ್: 'ಕರ್ನಾಟಕದಲ್ಲಿನ ಕ್ರಿಶ್ಚಿಯನ್ನರಿಗೆ ಸೂಕ್ತ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳಬೇಕು' ಎಂದು ಮೇಘಾಲಯದ ಏಕೈಕ ಬಿಜೆಪಿ ಸಚಿವ ಸನ್ಬೋರ್ ಶುಲ್ಲೈ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಶನಿವಾರ ಪತ್ರ ಬರೆದಿರುವಅವರು, 'ಕರ್ನಾಟಕದಲ್ಲಿ ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಕರ್ನಾಟಕ ಸರ್ಕಾರ ಚರ್ಚ್ ಮತ್ತು ಕ್ರೈಸ್ತರಿಗೆ ಸಂಬಂಧಿಸಿದ ಸಂಘ–ಸಂಸ್ಥೆಗಳ ಸಮೀಕ್ಷೆ ಮಾಡಲು ಹೊರಟಿದೆ. ಈ ಮೂಲಕ ಅಲ್ಪಸಂಖ್ಯಾತರನ್ನು ಹತ್ತಿಕ್ಕಲು ನೋಡುತ್ತಿದೆ' ಎಂದು ತಿಳಿಸಿದ್ದಾರೆ.
'ಕ್ರಿಶ್ಚಿಯನ್ ಸಮುದಾಯವನ್ನು ಈ ಮೂಲಕ ತುಳಿಯಲು ಹೊರಟಿರುವುದು ಸಂಪೂರ್ಣ ಸಂವಿಧಾನಬಾಹಿರ' ಎಂದು ತಿಳಿಸಿದ್ದಾರೆ.
'ಕರ್ನಾಟಕ ಸರ್ಕಾರದ ಈ ನಡೆಯ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ಅನೇಕ ಕ್ರಿಶ್ಚಿಯನ್ ಸಂಘಟನೆಗಳು ದೂರು ಸಲ್ಲಿಸಿವೆ. ಇದನ್ನು ಪರಿಗಣಿಸಿ ಕೂಡಲೇ ಕರ್ನಾಟಕದಲ್ಲಿ ಕ್ರಿಶ್ಚಿಯನ್ನರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಕ್ರಮ ಕೈಗೊಳ್ಳಲು ಆದೇಶಿಸಬೇಕು' ಎಂದು ಒತ್ತಾಯಿಸಿದ್ದಾರೆ.
'ಕರ್ನಾಟಕ ಸರ್ಕಾರ ಮಾಡಲು ಹೊರಟಿರುವ ಈ ಗಣತಿ ಕಾರ್ಯದಿಂದ ಭಾರತಕ್ಕೆ ವಿಶ್ವಮಟ್ಟದಲ್ಲಿ ಇರುವ ‘ಜಾತ್ಯಾತೀತ ರಾಷ್ಟ್ರ’ ಎಂಬ ಖ್ಯಾತಿಗೆ ಪೆಟ್ಟು ಬೀಳುತ್ತದೆ' ಎಂದಿದ್ದಾರೆ.
ಇತ್ತೀಚೆಗೆ ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದಲ್ಲಿನ ಚರ್ಚ್ಗಳು ಹಾಗೂ ಕ್ರಿಶ್ಚಿಯನ್ ಸಮುದಾಯದ ಸಂಘ–ಸಂಸ್ಥೆಗಳ ಬಗ್ಗೆ ಗಣತಿ ನಡೆಸಲು ಆದೇಶಿಸಿತ್ತು.