ದುಬೈ: ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ ಉಂಟಾದ ಪಾದದ ಗಾಯವು ಗಂಭೀರವಾಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಮಿಷೆಲ್ ಮಾರ್ಶ್ ಈ ಬಾರಿಯ ಐಪಿಎಲ್ನಿಂದಲೇ ಹೊರನಡೆಯುವ ಸಾಧ್ಯತೆಗಳಿವೆ ಎಂದು ತಂಡದ ಮೂಲಗಳು ತಿಳಿಸಿವೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಮಾರ್ಶ್ ಅವರಿಗೆ ಆರ್ಸಿಬಿ ಎದುರಿನ ಪಂದ್ಯದ ವೇಳೆ ಐದನೇ ಓವರ್ ಬೌಲಿಂಗ್ ಮಾಡಲು ನಾಯಕ ಡೇವಿಡ್ ವಾರ್ನರ್ ಚೆಂಡು ನೀಡಿದ್ದರು. ಆದರೆ ಅವರು ಕೆಲವೇ ಎಸೆತಗಳಿಗೆ ಸೀಮಿತವಾದರು. ಕಾಲಿನ ಗಾಯಕ್ಕೆ ತುತ್ತಾದ ಮಾರ್ಶ್ ನಂತರ ಚೆಂಡನ್ನು ವಿಜಯಶಂಕರ್ ಅವರಿಗೆ ಹಸ್ತಾಂತರಿಸಲಾಯಿತು.
ವೃತ್ತಿಜೀವನದ ಸರಣಿ ಗಾಯಗಳಿಂದ ಬಳಲುತ್ತಿರುವ ಮಾರ್ಶ್, ಸೋಮವಾರದ ಪಂದ್ಯದ ವೇಳೆ ಐದನೇ ಓವರ್ನ ಎರಡನೇ ಎಸೆತದಲ್ಲಿ ಗಾಯಗೊಂಡು. ಅವರ ಪಾದ ತಿರುಚಲ್ಪಟ್ಟಿತು. ನಂತರ ಅವರು ಎರಡು ಬಾಲ್ಗಳನ್ನು ಎಸೆದರಾದರೂ, ಇನ್ನೂ ಎರಡು ಬಾಲ್ಗಳಿರುವಾಗಲೇ ಕ್ರೀಡಾಂಗಣದಿಂದ ಹೊರ ನಡೆದರು.
ಚೇಸಿಂಗ್ ಮಾಡುವ ವೇಳೆ ಹೈದರಾಬಾದ್ ತಂಡ ವಿಕೆಟ್ ಇಲ್ಲದೇ ಪರದಾಡುತ್ತಿದ್ದಾಗ 10ನೇ ಆಟಗಾರನಾಗಿ ಬ್ಯಾಟ್ ಮಾಡಲು ಮಾರ್ಶ್ ಕಣಕ್ಕಿಳಿದರು. ಆದರೆ, ಅವರಿಂದ ನಿಲ್ಲಲೂ ಸಾಧ್ಯವಾಗದೇ ಇದ್ದದ್ದು ಬಹಿರಂಗವಾಯಿತು. ಕೊನೆಗೆ ಅವರೂ ಔಟಾಗಬೇಕಾಯಿತು.
'ಮಾರ್ಶ್ಗೆ ಗಂಭೀರ ಗಾಯವಾದಂತೆ ಕಾಣುತ್ತಿದೆ. ಅವರು ಮುಂದಿನ ಯಾವುದೇ ಪಂದ್ಯಗಳಲ್ಲಿ ಆಟವಾಡಲು ಸಾಧ್ಯವಾಗುವುದೇ ಎಂಬುದರ ಬಗ್ಗೆ ನನಗೆ ಖಚಿತವಿಲ್ಲ,’ ಎಂದು ತಂಡದ ಮೂಲಗಳು ತಿಳಿಸಿವೆ. ಈ ಕುರಿತು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಆದರೆ, ಮಾರ್ಶ್ ಗಾಯದ ಸ್ವರೂಪದ ಬಗ್ಗೆ ತಂಡ ಈ ವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಸನ್ರೈಸರ್ ತಂಡದಲ್ಲಿ ಗಾಯದಾಟ
ಇದೊಂದೇ ಅಲ್ಲದೆ, ರನ್ ಓಡುವಾಗ ಅಭಿಷೇಕ್ ಶರ್ಮಾ ಮತ್ತು ರಶೀದ್ ಖಾನ್ ಇಬ್ಬರು ಪರಸ್ಪರ ಗುದ್ದಿಕೊಂಡರು. ತಲೆಗೆ ಪೆಟ್ಟುಬಿದ್ದು ನೆಲಕ್ಕುರುಳಿದ ರಶೀದ್ ಖಾನ್ ಸ್ವಲ್ಪಹೊತ್ತು ಮೇಲೇಳಲಾರದೆ ನರಳಾಡಿದರು. ನಂತರ, ಸುಧಾರಿಸಿಕೊಂಡು ಬ್ಯಾಟ್ಮಾಡಲು ಬಂದ ರಶೀಲ್ ಕೆಲವೇ ಎಸತದಲ್ಲಿ ಔಟಾದರು.
ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ದುಬೈನಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ, ಆರ್ಸಿಬಿ 10 ರನ್ಗಳ ಜಯ ದಾಖಲಿಸಿದೆ.