ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಗರ್ಭಗುಡಿಯ ನಿಯಮ ಘಟ್ಟಕ್ಕೂ ಬೇಕು

Last Updated 14 ಜನವರಿ 2022, 19:30 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟಗಳೆಂದರೆ ಆ ಘಟ್ಟ ಪ್ರದೇಶದ ನಿವಾಸಿಗಳ ಆಸ್ತಿ ಅಷ್ಟೇ ಅಲ್ಲ. ಅದು ರಾಜ್ಯದ ಆಸ್ತಿ, ದೇಶದ ಆಸ್ತಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಅದು ಜಾಗತಿಕ ಆಸ್ತಿ. ಕಳೆದ 350 ಕೋಟಿ ವರ್ಷಗಳಿಂದ ನಿಸರ್ಗದ ಐದೂ ಶಕ್ತಿಗಳು ಒಂದಾಗಿ ಕಡೆದು ನಿಲ್ಲಿಸಿದ ಅಪರೂಪದ ಜೀವಶಿಲ್ಪ ಅದು. ಈಚಿನ ವರ್ಷಗಳಲ್ಲಿ ಆ ಶಿಲ್ಪವನ್ನು ವಿರೂಪಗೊಳಿಸುವ ಕ್ರಿಯೆಯಲ್ಲಿ ಇಡೀ ಜಗತ್ತಿನ ಯಂತ್ರಬಲವೇ ಟೊಂಕಕಟ್ಟಿ ನಿಂತಂತಿದೆ. ಅಲ್ಲಿ ಮರ ಕಡಿಯಲು ಜರ್ಮನ್‌ ಇಲೆಕ್ಟ್ರಿಕ್‌ ಗರಗಸಗಳು ಬಂದಿವೆ. ಜಪಾನೀ ಹಿಟಾಚಿ ಯಂತ್ರಗಳು ಗುಡ್ಡಗಳನ್ನು ಸಪಾಟು ಮಾಡುತ್ತಿವೆ. ಟರ್ಕಿಯ ಡೈನಮೈಟ್‌ಗಳು ಅಲ್ಲಿನ ಕಣಿವೆಗಳಲ್ಲಿ ಸ್ಫೋಟಿಸುತ್ತಿವೆ. ಅಂಥ ಜಾಗತಿಕ ಧ್ವಂಸ ಕ್ರಿಯೆಯನ್ನು ತಡೆಗಟ್ಟಬೇಕೆಂದರೆ ಜಾಗತಿಕ ವಿವೇಕವೇ ಜಾಗೃತವಾಗಬೇಕಿದೆ. ಅದಕ್ಕೆ ವರ್ತಮಾನದ ದೃಷ್ಟಿಕೋನ ಇದ್ದರೆ ಸಾಲದು. ನೂರು ವರ್ಷಗಳಾಚಿನ ದೂರದರ್ಶಿ ಧೋರಣೆ ಬೇಕಿದೆ. ನಾವು ಈ ಖಜಾನೆಯ ಬಹುಪಾಲನ್ನು ಇಂದೇ ಲೂಟಿ ಹೊಡೆದರೆ ಮುಂದಿನ ಪೀಳಿಗೆಗೆ ಅದನ್ನು ಉಳಿಸಿಕೊಳ್ಳಬೇಕೆಂಬ ಆಸಕ್ತಿಯೇ ಉಳಿಯಲಾರದು.

ಪಶ್ಚಿಮ ಘಟ್ಟಗಳ ಕೊಡುಗೆ ಭೂಗ್ರಹಕ್ಕೆ ಮೂರು ವಿಧವಾದದ್ದು. ಒಂದು, ಅದೊಂದು ಅಪರೂಪದ ಜೀವಖಜಾನೆ. ಅದನ್ನಿನ್ನೂ ನಾವು ಸರಿಯಾಗಿ ನೋಡಲೇ ಇಲ್ಲ. ಎರಡನೆಯದಾಗಿ, ಏಳು ರಾಜ್ಯಗಳಿಗೆ ಅದೊಂದು ಜಲಖಜಾನೆ. ಮೂರನೆಯದಾಗಿ ಅದು ಇಡೀ ದಕ್ಷಿಣ ಭಾರತದ ಹವಾಗುಣವನ್ನು ಪ್ರಭಾವಿಸುತ್ತಿದೆ, ನಿರ್ಧರಿಸುತ್ತಿದೆ. ಬರುತ್ತಿರುವ ಭೂಜ್ವರದ ಸನ್ನಿವೇಶದಲ್ಲಿ ಅದರ ಪಾತ್ರ ಇನ್ನಷ್ಟು ಮಹತ್ವದ್ದಾಗುತ್ತಿದೆ. ಹಾಗಾಗಿ ಈ ರಕ್ಷಾಕವಚವನ್ನು ನಾವು ರಕ್ಷಿಸಿಕೊಳ್ಳಬೇಕು. ಶತಮಾನದ ನಂತರದ ಪೀಳಿಗೆಗಾಗಿ ಅಷ್ಟೇ ಅಲ್ಲ; ಈಗಿನ ಪೀಳಿಗೆಗೂ ಅದನ್ನು ಉಳಿಸಿಕೊಳ್ಳಬೇಕು. ಈ ಘಟ್ಟಸಾಲುಗಳು ಕ್ಷೇಮವಾಗಿದ್ದರೆ ನಾವೂ ಕ್ಷೇಮ ಎಂಬ ಪ್ರಜ್ಞೆ ಕೇವಲ ಘಟ್ಟನಿವಾಸಿಗಳಿಗಷ್ಟೇ ಅಲ್ಲ, ದೂರದ ರಾಯಚೂರು, ಬೀದರ್‌, ಕೊಳ್ಳೇಗಾಲದ ಜನಪ್ರತಿನಿಧಿಗಳಲ್ಲೂ ಜನರಲ್ಲೂ ಮೂಡಬೇಕು. ಈ ಘಟ್ಟಸಾಲಿಗೆ ಸಂಕಷ್ಟ ಬಂದರೆ ದಿಲ್ಲಿಯಲ್ಲಿದ್ದವರಷ್ಟೇ ಅಲ್ಲ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೂ ಅದನ್ನು ಗಂಭೀರವಾಗಿ
ಪರಿಗಣಿಸಬೇಕು.

ಈಗ ಅದಕ್ಕೆ ಸಂಕಷ್ಟ ಬಂದಿದೆ. ಏರುತ್ತಿರುವ ಜನಸಂಖ್ಯೆ ಹಾಗೂ ಅಭಿವೃದ್ಧಿಯ ಸುನಾಮಿ ಎರಡೂ ಅದನ್ನು ಕಂಡಕಂಡಲ್ಲಿ ಘಾಸಿ ಮಾಡುತ್ತಿವೆ. ಘಟ್ಟದ ಮೂಲನಿವಾಸಿಗಳು ತಮಗೂ ಕರೆಂಟ್‌ ಬೇಕು, ಕಾಂಕ್ರೀಟ್‌ ರಸ್ತೆ ಬೇಕು, ನೆಟ್‌ವರ್ಕ್‌ ಬೇಕು, ಶುಂಠಿ ಬೆಳೆಯಲು ಜೆಸಿಬಿ ಬೇಕು, ಕೀಟನಾಶಕ ವಿಷ ಬೇಕು ಎನ್ನುತ್ತಿದ್ದಾರೆ. ಘಟ್ಟದಾಚಿನ ಕೋಟ್ಯಧೀಶರೂ ತಮಗೆ ಅಲ್ಲೊಂದು ಎಸ್ಟೇಟ್‌ ಬೇಕು, ಬ್ರಿಜ್‌ ಬೇಕು, ರೆಸಾರ್ಟ್‌ ಬೇಕು, ಬೋರ್‌ವೆಲ್‌ ಬೇಕು, ಟ್ರೀ ಹೌಸ್‌ ಬೇಕು, ರೋಪ್‌ವೇ ಬೇಕು, ಮಿನಿಹೈಡೆಲ್‌ ಬೇಕು, ಆರ್ಕಿಡೇರಿಯಂ ಬೇಕು ಎಂದು ಬಯಸುತ್ತಾರೆ. ಅವರಿಗೆ ನೆರವಾಗಲೆಂದು ಮರಳು, ಗ್ರಾನೈಟ್‌, ಟಿಂಬರ್‌ ದಲ್ಲಾಳಿಗಳು, ಗುತ್ತಿಗೆದಾರರು, ಟೂರ್‌ ಮತ್ತು ಕೇಬಲ್‌ ಆಪರೇಟರ್‌ಗಳು. ಅವರ ಮಧ್ಯೆ ಕಳ್ಳಸಾಗಣೆದಾರರು, ಬೇಟೆಗಾರರು, ಅತಿಕ್ರಮಣದಾರರು, ಕಾರ್ಪೊರೇಟ್‌ ತಳಿಚೋರರು. ಕೋಟಿಗಟ್ಟಲೆ ಜನರು ಹೀಗೆ ಲಗ್ಗೆ ಹಾಕಿರುವಾಗ ಅಭಿವೃದ್ಧಿಯ ಈ ಸುನಾಮಿಗೆ ತಡೆಗೋಡೆ ಹಾಕಲೇಬೇಕು ಎಂದು ವಿವೇಕವಂತರು ಬಯಸುತ್ತಾರೆ.

ಅದರ ಫಲವೇ ಈ ಗಾಡ್ಗೀಳ್‌ ವರದಿ, ಕಸ್ತೂರಿ ರಂಗನ್‌ ವರದಿ. ಘಟ್ಟನಿವಾಸಿಗಳ ಬದುಕುವ ಹಕ್ಕುಗಳಿಗೆ ಧಕ್ಕೆ ಆಗದಂತೆ, ಆದರೆ ಘಟ್ಟದ ಲಗ್ಗೆಗೆ ಮಿತಿ ಹಾಕಬಲ್ಲ ಕೆಲವು ಶಿಫಾರಸುಗಳನ್ನು ಅವು ಮಾಡಿವೆ. ಈಗಿರುವ ಅರಣ್ಯ ರಕ್ಷಣಾ ಕಾನೂನುಗಳ ಅಡಿಯಲ್ಲಿ ಕೆಲವು ಪ್ರದೇಶಗಳು (ತಕ್ಕಮಟ್ಟಿಗೆ) ಸುರಕ್ಷಿತ ಇವೆ ನಿಜ. ಅದರಾಚೆಗೂ ಕೆಲವು ನಿರ್ಬಂಧ ಹಾಕಬೇಕೆಂದು ವರದಿ ಹೇಳುತ್ತದೆ. ಕ್ಯಾನ್ಸರ್‌ ಕಾಯಿಲೆ ಉಲ್ಬಣದ ಸ್ಥಿತಿಗೆ ಹೋಗುತ್ತಿರುವಾಗ ಅಳಿದುಳಿದ ಅಂಗಾಂಗಳನ್ನು ಸುರಕ್ಷಿತ ಇಡಲು ಕಟ್ಟುನಿಟ್ಟಾದ ಥೆರಪಿ ಬೇಕಲ್ಲವೆ? ಆದರೆ ‘ವೈದ್ಯರೇ ಬೇಡ, ಮನೆಮದ್ದು ಸಾಕು’ ಎಂಬಂತೆ (ಕಸ್ತೂರಿ ರಂಗನ್‌ ವರದಿಯೇ ಬೇಡವೆಂದು) ಸಚಿವ ಸಂಪುಟ ನಿರ್ಧರಿಸಿದೆ. ‘ಈಗಿರುವ ಅರಣ್ಯ ರಕ್ಷಣಾ ಕಾನೂನುಗಳೇ ಸಾಕು; ಹೆಚ್ಚಿನದೇನೂ ಬೇಕಾಗಿಲ್ಲ’ ಎಂಬ ಧೋರಣೆ ಅದರದ್ದು.

ಕಸ್ತೂರಿ ರಂಗನ್‌ ವರದಿಯನ್ನು ಯಾರಾದರೂ ಓದಿದ್ದಾರೆಯೆ? ಹೋಗಲಿ, ಕನ್ನಡಕ್ಕೆ ಅದನ್ನು ತರ್ಜುಮೆ ಮಾಡಿ, ಘಟ್ಟನಿವಾಸಿಗಳ ಜೊತೆ ಸಮಾಲೋಚನೆ, ವಿವೇಕವಂತರ ಜೊತೆ ಚರ್ಚೆ ನಡೆಸಿ ನಂತರ ನಿರ್ಣಯಿಸಬಹುದಿತ್ತು. ಅದನ್ನು ಮಾಡಿಲ್ಲ. ಡಾ. ಕಸ್ತೂರಿ ರಂಗನ್‌ ಬೆಂಗಳೂರಿನಲ್ಲೇ ಇದ್ದಾರೆ. ಅವರನ್ನು ವಿಧಾನ ಸಭೆಗೆ ಕರೆಸಿ ಸಮಿತಿಯ ಆಶಯ ಏನಿತ್ತೆಂಬುದನ್ನು ಶಾಸಕರಿಗೆ ತಿಳಿಸುವ ಯತ್ನ ಮಾಡಬಹುದಿತ್ತು. ಅದನ್ನೂ ಮಾಡಿಲ್ಲ. ಪಶ್ಚಿಮಘಟ್ಟಗಳೆಂಬ ಈ ಅಪರೂಪದ ಜಾಗತಿಕ ಖಜಾನೆಯ ಅತಿ ದೊಡ್ಡ ಭಾಗ (ಶೇಕಡಾ 65 ಪಾಲು) ನಮ್ಮ ರಾಜ್ಯದಲ್ಲೇ ಇದೆ. ಅದರ ರಕ್ಷಣೆಯ ಅತಿ ದೊಡ್ಡ ಹೊಣೆ ನಮ್ಮದು. ಹಾಗಿರುವಾಗ ನಾವೇ ಇದರ ‘ಹಣೇಬರ ಆದದ್ದಾಗಲಿ, ಶುಶ್ರೂಷೆ ಅಗತ್ಯವಿಲ್ಲ’ ಎಂಬ ಧೋರಣೆ ತಳೆದಿದ್ದು ಸರಿಯೆ? ಅದು ನಮ್ಮ ಜಾಗತಿಕ ಜವಾಬ್ದಾರಿಯನ್ನು ನಿರ್ವಹಿಸುವ ರೀತಿಯೆ?

ಈ ವರದಿಯಲ್ಲಿ ಗ್ರಾಮಸ್ಥರನ್ನು ಅವರ ನೆಲೆಯಿಂದ ಹೊರದೂಡುವ ಪ್ರಸ್ತಾವ ಇಲ್ಲ. ಅವರ ನಿತ್ಯ ಜೀವನಕ್ಕೆ ಯಾವುದೇ ತೊಂದರೆ ಉಂಟುಮಾಡುವ ಕ್ರಮಗಳೂ ಇಲ್ಲ. ನಿರ್ಬಂಧಿತ ಏನೇನೆಂದರೆ (1) ವಾಣಿಜ್ಯ ಉದ್ದೇಶಕ್ಕಾಗಿ ಮರಳು ಮತ್ತು ಕಲ್ಲಿನ ಗಣಿಗಾರಿಕೆಗೆ ಅನುಮತಿ ಇಲ್ಲ (ಆದರೆ ಸ್ವಂತಕ್ಕೆ ಅಂಥ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು; ಕಿರು ಜಲವಿದ್ಯುತ್, ಗಾಳಿಯಂತ್ರ, ಸೋಲಾರ್‌ ಸ್ಥಾಪಿಸಬಹುದು). ಪರಿಸರಕ್ಕೆ ಅಪಾಯ ತರಬಲ್ಲ (ಅಂದರೆ ಈಗಾಗಲೇ ‘ಕೆಂಪು ಪಟ್ಟಿ’ಗೆ ಸೇರಿದ) ಉದ್ಯಮಗಳು- ಅಂದರೆ ರಸಗೊಬ್ಬರ, ಕೀಟನಾಶಕಗಳ ತಯಾರಿಕೆ ಹಾಗೂ ಕಚ್ಚಾತೈಲ ಸಂಸ್ಕರಣೆ ಮಾಡುವಂತಿಲ್ಲ; (3) ನೀರಿಗೆ ಕೊಳೆ ಸೇರಿಸುವ ಕಾಫಿ ಪಲ್ಪಿಂಗ್‌, ಗೋಡಂಬಿ-ಕಿತ್ತಳೆ, ಅನಾನಸ್‌ ಮತ್ತಿತರ ಆಹಾರ ಸಂಸ್ಕರಣೆಗೆ ಮುಕ್ತ ಅವಕಾಶ ಇಲ್ಲ. ಗ್ರಾಮಸಭೆ ಒಪ್ಪಿದರೆ ಮಾತ್ರ ಅನುಮತಿ. (4) 20 ಸಾವಿರ ಚ.ಮೀ. ಮೀರಿದ ಭಾರೀ ಕಟ್ಟಡ ಕಟ್ಟುವಂತಿಲ್ಲ; 50 ಹೆಕ್ಟೇರ್‌ ಮೀರಿದ ಪಟ್ಟಣ ವಿಸ್ತರಣೆ ಇಲ್ಲ.
ಇದರಲ್ಲಿ ಯಾವ ಅಂಶ ಜನವಿರೋಧಿ ಇವೆ ಹೇಳಿ! ಗಣಿಗಾರಿಕೆಗೆ, ದೊಡ್ಡ ಉದ್ಯಮಗಳಿಗೆ ಮಾತ್ರ ಅಲ್ಲಿ ದಂಧೆ ನಡೆಸುವುದು ಕಷ್ಟವಾಗುತ್ತದೆ. ಜನರ ಬದುಕಿಗೆ ಯಾವ ತೊಂದರೆಯೂ ಇಲ್ಲವಲ್ಲ. ಈ ಭೂಭಾಗವನ್ನು ನಿಸರ್ಗದ ಗರ್ಭಗುಡಿ ಎಂದು ಪರಿಗಣಿಸುವುದಾದರೆ, ಅದರಲ್ಲಿದ್ದವರು ಅದರ ನೈರ್ಮಲ್ಯ ಕಾಪಾಡಬೇಕು. ಅಲ್ಲಿ ಕೆಲವು ಅಪವಿತ್ರ ಕೆಲಸಗಳಿಗೆ ನಿಷೇಧ ಹಾಕಿರಬೇಕು. ಈ ವರದಿಗೆಂದು ಗಡಿ ಗುರುತಿಸುವಾಗ ಕೆಲವು ಲೋಪಗಳಾಗಿವೆ ನಿಜ. ಯಾವುದು ನೈಸರ್ಗಿಕ, ಯಾವುದು ಮಾನವ
ನಿರ್ಮಿತ ಎಂಬುದನ್ನು ಉಪಗ್ರಹ ನಕಾಶೆಯಲ್ಲಿ ಸೂಚಿಸುವಾಗ ಅಲ್ಲಲ್ಲಿ ಕೆಲವು ಊರುಗಳೂ ನೈಸರ್ಗಿಕ ವಿಭಾಗಕ್ಕೆ ಸೇರಿವೆ. ಆಗಲೂ ಜನರು ಆತಂಕಪಡಬೇಕಿಲ್ಲ. ಏಕೆಂದರೆ ಅಲ್ಲಿಯೂ ಜನರನ್ನು ಗುಳೆ ಎಬ್ಬಿಸುವ ಸೂಚನೆ ಕೂಡ ಇಲ್ಲ.

ನಾಗೇಶ ಹೆಗಡೆ
ನಾಗೇಶ ಹೆಗಡೆ

ಕೇರಳದಲ್ಲಿ ಕಸ್ತೂರಿ ರಂಗನ್‌ ವರದಿಯನ್ನು ಮಲೆಯಾಳಂ ಭಾಷೆಗೆ ಅನುವಾದಿಸಿ, ವಿವಾದಿತ ಸ್ಥಳಗಳನ್ನು ಗುರುತಿಸಿ, ಸ್ಥಳೀಯ ಜನರ ಜೊತೆ ಸಮಾಲೋಚನೆ ನಡೆಸಿ ಕೆಲವು ಸ್ಥಳಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. ನಮ್ಮಲ್ಲಿ ಅಂಥ ಯಾವುದನ್ನೂ ಮಾಡದೇ ಇಡೀ ವರದಿಯೇ ಜನಪರ ಇಲ್ಲ ಎಂದು ನಿರ್ಣಯಿಸುವುದರ ಹಿಂದೆ ಉದ್ಯಮಿಗಳ ಹಾಗೂ ಗುತ್ತಿಗೆದಾರರ ಕೈವಾಡ ಇದೆ ಎಂಬುದು ಸ್ಪಷ್ಟವಾಗಿದೆ. ಗ್ರಾಮೀಣ ಪ್ರಜಾಪ್ರಭುತ್ವವನ್ನು ಕಡೆಗಣಿಸಿ, ಬೆಂಗಳೂರಿನ ಅಧಿಕಾರಶಾಹಿ ನಿರ್ಣಯವನ್ನೇ ದಿಲ್ಲಿಗೆ ಕಳಿಸುವು ದೆಂದರೆ ಅದು ಪ್ರಜಾಪ್ರಭುತ್ವದ ಅಣಕವೇ ವಿನಾ ಮತ್ತೇನಲ್ಲ. ದೂರದೃಷ್ಟಿ ಇಲ್ಲದ, ಸ್ವಾರ್ಥಸಾಧಕರ ದನಿಯೇ ಅಂತಿಮವಾದರೆ ಅದು ಜೀವವಿರೋಧಿ ಧೋರಣೆಯೇ ವಿನಾ ಮತ್ತೇನಲ್ಲ.

ಲೇಖಕ: ವಿಜ್ಞಾನ ಬರಹಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT