ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾಪಡೆಗಳ ಉಪಸ್ಥಿತಿ ಹೆಚ್ಚುತ್ತಿರುವ ನಡುವೆಯೇ, ಭಾರತ ಮತ್ತು ಥಾಯ್ಲೆಂಡ್ನ ನೌಕಾಪಡೆಗಳು ಬುಧವಾರದಿಂದ ಜಂಟಿಯಾಗಿ ಮೂರು ದಿನಗಳ ಕಾಲ ಅಂಡಮಾನ್ ಸಮುದ್ರದಲ್ಲಿ ಗಸ್ತು ತಿರುಗಾಟ ನಡೆಸಿದವು.
ಅಂತರರಾಷ್ಟ್ರೀಯ ಕಡಲ ಗಡಿರೇಖೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಥಾಯ್ಲೆಂಡ್ ಜಂಟಿ ನೌಕಾ ಕವಾಯತಿನ 31ನೇ ಆವೃತ್ತಿಯ ಭಾಗವಾಗಿ ಎರಡು ದೇಶಗಳ ನೌಕಾಪಡೆಗಳ ಈ ಗಸ್ತು ತಿರುಗಾಟ ನಡೆದಿದೆ.
ಇದರಲ್ಲಿ, ಭಾರತದ ಯುದ್ಧನೌಕೆ ಐಎನ್ಎಸ್ ಸರಯೂ, ಥಾಯ್ಲೆಂಡ್ನ ಕ್ರಾಬಿ ಹಡಗು ಹಾಗೂ ಎರಡೂ ದೇಶಗಳ ನೌಕಾಪಡೆಯ ಯುದ್ಧ ವಿಮಾನಗಳು ಪಾಲ್ಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ವ್ಯಾಪಾರಕ್ಕಾಗಿ ಹಿಂದೂ ಮಹಾಸಾಗರದ ಪ್ರಮುಖ ಭಾಗವನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಹಿನ್ನೆಲೆಯಲ್ಲಿ ಎರಡು ನೌಕಾಪಡೆಗಳು 2005ರಿಂದ ಎರಡು ವರ್ಷಕ್ಕೊಮ್ಮೆ ಅಂತರರಾಷ್ಟ್ರೀಯ ಕಡಲ ಗಡಿರೇಖೆಯಲ್ಲಿ (ಐಎಂಬಿಎಲ್) ಜಂಟಿ ನೌಕಾ ಕವಾಯತು ನಡೆಸುತ್ತಿವೆ‘ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಾಧ್ವಾಲ್ ಹೇಳಿದ್ದಾರೆ.