ಗುರುಗ್ರಾಮ: ಭಯೋತ್ಪಾದಕರು ಮತ್ತು ಮಾದಕವಸ್ತು ಸಾಗಣೆದಾರರ ಜೊತೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಮೂವರು ಗ್ಯಾಂಗ್ಸ್ಟರ್ಗಳ ಮನೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಂಗಳವಾರ ಶೋಧ ನಡೆಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎನ್ಐಎ ತಂಡದ ಜೊತೆ ಸ್ಥಳೀಯ ಪೊಲೀಸರು ಕೂಡ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದೂ ಹೇಳಿವೆ.
ಗುರುಗ್ರಾಮದ ನಹರ್ಪುರ ರೂಪಾ ಪ್ರದೇಶದ ರಾಜೀವ್ ಕಾಲೊನಿಯಲ್ಲಿರುವ ಗ್ಯಾಂಗ್ಸ್ಟರ್ಗಳಾದ ಅಮಿತ್ ಡಾಗರ್ ಮತ್ತು ಆತನ ಸಹಚರ ಸಂದೀಪ್ ಎಂಬಾತನ ಸಹೋದರ ಅನಿಲ್ ಮತ್ತು ಕರ್ತಾರ್ ಸಿಂಗ್ ಎಂಬುವವರ ಮನೆಗಳಲ್ಲಿ ಹಾಗೂ ಮುಷೈದ್ಪುರ ಗ್ರಾಮದ ಮಾಜಿ ಸರಪಂಚ್ನ ಮನೆಯಲ್ಲೂ ಶೋಧ ನಡೆದಿದೆ ಎಂದು ವಿವರಿಸಿವೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಮತ್ತು ಉತ್ತರಪ್ರದೇಶದ ವಿವಿಧೆಡೆ ಎನ್ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದಕ ಮತ್ತು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಗ್ಯಾಂಗ್ಸ್ಟರ್ಗಳು ಮತ್ತು ಅವರ ಸಹಚರರ ವಿರುದ್ಧ ಎನ್ಐಎ ಆಗಸ್ಟ್ 26ರಂದು ಪ್ರಕರಣ ದಾಖಲಿಸಿಕೊಂಡಿತ್ತು.