ನವದೆಹಲಿ: ರಾಜ್ಯಸಭೆಯ 12 ಮಂದಿ ಸಂಸದರನ್ನು ಅಮಾನತು ಮಾಡಿರುವ ವಿಚಾರವಾಗಿ ಕೇಂದ್ರ ಸರ್ಕಾರ ಮುಂದಿಟ್ಟಿರುವ ಮಾತುಕತೆ ಪ್ರಸ್ತಾವವನ್ನು ಪ್ರತಿಪಕ್ಷಗಳು ತಿರಸ್ಕರಿಸಿವೆ ಎಂದು ಮೂಲಗಳು ತಿಳಿಸಿವೆ.
ಪೀಯೂಷ್ ಗೋಯಲ್ ಇಂದು (ಸೋಮವಾರ) ಆಯೋಜಿಸಲಿರುವ ಸಭೆಯಲ್ಲಿ ಭಾಗವಹಿಸದಿರಲು ಅಮಾನತಾಗಿರುವ ಸಂಸದರು ಪ್ರತಿನಿಧಿಸುವ ನಾಲ್ಕು ರಾಜಕೀಯ ಪಕ್ಷಗಳು ತೀರ್ಮಾನಿಸಿವೆ ಎಂದು ಮೂಲಗಳು ಹೇಳಿವೆ.
ಕೇವಲ ನಾಲ್ಕು ರಾಜಕೀಯ ಪಕ್ಷಗಳಿಗೆ ಸಭೆಗೆ ಆಹ್ವಾನ ನೀಡಿರುವುದಕ್ಕೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಯ್ದ ಪಕ್ಷಗಳಿಗೆ ಮಾತ್ರ ಸಭೆಗೆ ಆಹ್ವಾನ ನೀಡಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಶಿವಸೇನಾ ಹಾಗೂ ಸಿಪಿಐ(ಎಂ) ಪಕ್ಷಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ.
‘ನಾವು ಸಭೆಗೆ ಹಾಜರಾಗುವುದಿಲ್ಲ. ಒಗ್ಗಟ್ಟಿನಿಂದ ಹೋರಾಟ ನಡೆಸಲಿದ್ದೇವೆ’ ಎಂದು ಪ್ರತಿಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.