ತಿರುವನಂತಪುರ: ಕೇರಳ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ಮೊದಲ ದಿನವಾದ ಶುಕ್ರವಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಭಾಷಣದ ವೇಳೆ, ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳ ಸದಸ್ಯರು ಬಳಿಕ ಸಭೆಯಿಂದ ಹೊರನಡೆದರು.
ಡಾಲರ್ ಕಳ್ಳಸಾಗಣೆ ಆರೋಪ ಎದುರಿಸುತ್ತಿರುವ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಸದನದಲ್ಲಿಆಗ್ರಹಿಸಿ ಪ್ರತಿಭಟನೆ ನಡೆಸಿದರು.
ರಾಜ್ಯಪಾಲರು ಸರ್ಕಾರದ ಯೋಜನೆ ಕುರಿತಾಗಿ ಭಾಷಣ ಮಾಡಲು ಆರಂಭಿಸಿದಾಗ, ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸ್ಪೀಕರ್ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು.
‘ನಾನು ನನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ಈ ವೇಳೆ ಯಾರು ಅಡೆತಡೆಗಳನ್ನು ಉಂಟು ಮಾಡಬಾರದು. ಈಗಾಗಲೇ ನೀವು ಹಲವು ಬಾರಿ ಘೋಷಣೆಗಳನ್ನು ಕೂಗಿದ್ದೀರಿ. ಪದೇ ಪದೇ ನನ್ನನ್ನು ತಡೆಯಬೇಡಿ’ ಎಂದು ರಾಜ್ಯಪಾಲರು ಪ್ರತಿಪಕ್ಷಗಳಿಗೆ ಸೂಚಿಸಿದರು.
ಆದರೆ ಇದಕ್ಕೆ ಕಿವಿಗೊಡದ ವಿರೋಧ ಪಕ್ಷದ ನಾಯಕರು, ಸಭಾಂಗಣದಿಂದ ಹೊರ ನಡೆದು ಪ್ರತಿಭಟನೆ ಮುಂದುವರಿಸಿದರು.