ನವದೆಹಲಿ: ‘ಊಹಾಪೋಹಗಳು, ಆಧಾರರಹಿತ ಮಾಧ್ಯಮ ವರದಿಗಳನ್ನು ಆಧರಿಸಿ ಪೆಗಾಸಸ್ ಗೂಢಚರ್ಯೆ ಬಗ್ಗೆ ಸ್ವತಂತ್ರ ತನಿಖೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸಲಿದೆ’ ಎಂದು ಕೇಂದ್ರ ಸರ್ಕಾರವುಸುಪ್ರೀಂಕೋರ್ಟ್ಗೆ ಸೋಮವಾರ ತಿಳಿಸಿದೆ.
‘ಪೆಗಾಸಸ್ ಗೂಢಚರ್ಯೆ ಆರೋಪದ ಬಗ್ಗೆ ಸರ್ಕಾರದ ನಿಲುವನ್ನು ಈಗಾಗಲೇ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರ ಪೀಠಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಹೇಳಲಾಗಿದೆ.
‘ಪೆಗಾಸಸ್ ಗೂಢಚರ್ಯೆ ಬಗ್ಗೆ ಸ್ವತಂತ್ರ ತನಿಖೆ ಸೇರಿದಂತೆ ಇತರೆ ಶೀರ್ಷಿಕೆಯ ಅರ್ಜಿಗಳನ್ನು ಆಧಾರರಹಿತ ಮತ್ತು ಮಾಧ್ಯಮಗಳ ಅಪೂರ್ಣ ವರದಿಗಳನ್ನು ಆಧರಿಸಿ ಸಲ್ಲಿಸಲಾಗಿದೆ. ಕೆಟ್ಟ ಉದ್ಧೇಶ ಮತ್ತು ಸ್ವಾರ್ಥ ಮನೋಭಾವನೆಯೊಂದಿಗೆ ಈ ಆರೋಪಗಳನ್ನು ಮಾಡಲಾಗಿದೆ. ಈ ಬಗ್ಗೆ ಪರಿಶೀಲಿಸಲು ತಜ್ಞರ ತಂಡವೊಂದನ್ನು ರಚಿಸಲಾಗಿದೆ’ ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
ಈ ವಿಷಯದ ಬಗ್ಗೆ ದಿನದ ವ್ಯವಹಾರಗಳ ಕೊನೆಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೀಠವು ಹೇಳಿದೆ.