ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಾರಾಣಸಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಕೃಷಿ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು.
ಈ ಯೋಜನೆಗಳ ಒಟ್ಟು ಮೊತ್ತ ₹614 ಕೋಟಿ ಎಂದು ಪ್ರಧಾನಿಮಂತ್ರಿಗಳ ಕಚೇರಿ ತಿಳಿಸಿದೆ.
ಈ ಯೋಜನೆಗಳ ಫಲಾನುಭವಿಗಳ ಜತೆ ಮೋದಿ ಅವರು ಮಾತುಕತೆಯನ್ನೂ ನಡೆಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಸಂದರ್ಭದಲ್ಲಿ ಹಾಜರಾಗಿದ್ದರು.
ಉದ್ಘಾಟನೆಗೊಂಡ ಯೋಜನೆಗಳಲ್ಲಿ ರಾಮನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಆಸ್ಪತ್ರೆ ನವೀಕರಣ ಅಲ್ಲದೆ ಒಳಚರಂಡಿ ಕಾಮಗಾರಿಗಳು, ಗೋವುಗಳ ರಕ್ಷಣೆಗೆ ಮೂಲ ಸೌಕರ್ಯ, ಸಂಪೂರ್ಣಾನಂದ ಕ್ರೀಡಾಂಗಣದಲ್ಲಿ ಆಟಗಾರರಿಗೆ ವಸತಿ ಸಂಕೀರ್ಣ, ಸಾರಾನಾಥ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮಗಳು ಸೇರಿವೆ.