ಪಣಜಿ:ಲಕ್ಷಾಂತರು ಜನರು ತಾಯಿಯಾಗಿ ಕಾಣುತ್ತಿರುವಪವಿತ್ರ ಗಂಗಾ ನದಿಯನ್ನು ಚುನಾವಣೆ ವೇಳೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಳ್ಳುತ್ತಾರೆ. ಅವರು ವೋಟಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕೆ ಮಾಡಿದ್ದಾರೆ.
ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿರುವ ಪ್ರಧಾನಿ ಮೋದಿ, ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದರು.
ಎರಡು ದಿನಗಳ ಗೋವಾ ಪ್ರವಾಸದಲ್ಲಿರುವ ಮಮತಾ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 'ಮತಗಳನ್ನು ಪಡೆಯಲು ಪ್ರಧಾನಿ ಮೋದಿ ಏನು ಬೇಕಾದರೂ ಮಾಡುತ್ತಾರೆ. ಉತ್ತರಾಖಂಡದಲ್ಲಿ ತಪ್ಪಸ್ಸು (ಧ್ಯಾನ) ಮಾಡಿದ್ದರು. ಈಗ ಗಂಗಾನದಿಯಲ್ಲಿ ಸ್ನಾನ ಮಾಡಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಏನೂ ಬೇಕಾದರೂ ಮಾಡಲಿ, ಅವರಿಗೆ ಸ್ವಾತಂತ್ರ್ಯವಿದೆ. ಆದರೆ ವರ್ಷಪೂರ್ತಿ ನೀವು ಎಲ್ಲಿದ್ದಿರಿ' ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಕೋವಿಡ್-19 ಮೃತದೇಹಗಳನ್ನು ಗಂಗಾ ನದಿಗೆ ಎಸೆಯುವ ಮೂಲಕ ಅಪವಿತ್ರಗೊಳಿಸಿದೆ ಎಂದು ಯೋಗಿ ಆದಿತ್ಮನಾಥ್ ಸರ್ಕಾರದ ವಿರುದ್ಧವೂ ಟೀಕೆ ಮಾಡಿದರು.
'ನಾವು ಗಂಗಾಜಲವನ್ನು ಪವಿತ್ರ ಎಂದು ನಂಬುತ್ತೇವೆ. ತಾಯಿ ಎಂದು ಕರೆಯುತ್ತೇವೆ. ಆದರೆ ಬಿಜೆಪಿಯವರು ಕೋವಿಡ್ನಿಂದ ಸಾವಿಗೀಡಾದವರ ಮೃತದೇಹಗಳನ್ನು ಗಂಗಾ ನದಿಗೆ ಎಸೆದಿದ್ದಾರೆ' ಎಂದು ಆರೋಪಿಸಿದರು.
'ಕುಂಭ ಮೇಳದಂತೆ ಪಶ್ಚಿಮ ಬಂಗಾಳದ ಗಂಗಾಸಾಗರಕ್ಕೆ ಸುಮಾರು 23 ಲಕ್ಷ ಜನರು ಭೇಟಿ ನೀಡುತ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ಗಂಗಾನದಿ ಪೂಜೆ ಮಾಡುವುದಿಲ್ಲ. ಆದರೆ ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಗೆ ಹೋಗಿರುವ ಮೋದಿ, ಕೇವಲ ಮತ ಪಡೆಯಲು ಮಾತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ' ಎಂದು ಆರೋಪಿಸಿದರು.
ಗೋವಾ ವಿಧಾನಸಬಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರಸ್ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿದೆ. ಅವರು (ಬಿಜೆಪಿ) ನಾವು ಬೆಂಗಾಲಿಗಳು ಎಂದು ಹೇಳುತ್ತಾರೆ. ಆದರೆ ಅವರು ಯಾರು? ಅವರು ಗುಜರಾತಿಗಳು. ಗುಜರಾತಿಗಳು ಇಲ್ಲಿಗೆ ಬರಬಾರದು ಎಂದು ನಾವು ಎಂದಾದರೂ ಹೇಳಿದ್ದೇವೆಯೇ? ಗುಜರಾತಿಗಳು ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ಹೋಗಬಹುದಾದರೆ ಬಂಗಾಳಿಗಳು ಏಕೆ ಹೋಗಬಾರದು ? ಒಬ್ಬ ಬಂಗಾಳಿ ರಾಷ್ಟ್ರಗೀತೆಯನ್ನು ಬರೆಯಬಹುದಾದರೆ, ಅವರು ಗೋವಾಕ್ಕೆ ಬರಬಹದುದಲ್ಲವೇ? ಮಹಾತ್ಮ ಗಾಂಧಿ ಇಡೀ ರಾಷ್ಟ್ರದ ನಾಯಕರಾಗಿ ಗುರುತಿಸುತ್ತಾರೆ ಹೊರತು ಯಾವುದೇ ನಿರ್ದಿಷ್ಟ ರಾಜ್ಯದ ನಾಯಕರಲ್ಲ. ಅವರು ದೇಶದ ಯಾವ ಭಾಗಕ್ಕೆ ಸೇರಿದವದರು ಎಂದು ನಾವು ಯೋಚಿಸುವುದಿಲ್ಲ. ನಿಜ ನಾಯಕ ದೇಶವನ್ನು ಒಗ್ಗಟ್ಟಿನಿಂದ ಮುನ್ನಡೆಸುತ್ತಾರೆ' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.