ಲಖನೌ: ಕೋವಿಡ್ ಲಸಿಕೆ ವಿಷಯದಲ್ಲಿ ರಾಜಕೀಯ ಮಾಡುವುದನ್ನು ತೀವ್ರವಾಗಿ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆಯ ಕುರಿತ ಭಯ ನಿವಾರಿಸುವ ಪ್ರಯತ್ನ ಮಾಡಿದ್ದಾರೆ. ಲಸಿಕೆ ನೀಡಿಕೆ ವಿಚಾರದಲ್ಲಿ ವಿಜ್ಞಾನಿಗಳ ಸಲಹೆಯಂತೆ ನಡೆದುಕೊಂಡಿರುವುದಾಗಿಯೂ ಹೇಳಿದ್ದಾರೆ.
ವಾರಾಣಸಿ ಲೋಕಸಭಾ ಕ್ಷೇತ್ರದ ಆರೋಗ್ಯ ಕಾರ್ಯಕರ್ತರ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದದಲ್ಲಿ ಭಾಗವಹಿಸಿದ ಅವರು, ಭಾರತ್ ಬಯೋಟೆಕ್ನ ‘ಕೊವ್ಯಾಕ್ಸಿನ್’ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿರುವ ಬಗ್ಗೆ ಎದುರಾದ ಟೀಕೆಗಳ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.
‘ವಿಜ್ಞಾನಿಗಳು ಹೇಳಿದ್ದನ್ನು ನಾನು ಮಾಡುತ್ತೇನೆ ಎಂಬ ಒಂದೇ ಪ್ರತಿಕ್ರಿಯೆ ನೀಡಿದ್ದೇನೆ. ಇದು ರಾಜಕಾರಣಿಗಳು ನಿರ್ಧರಿಸುವಂಥ ವಿಷಯವಲ್ಲ’ ಎಂದು ಅವರು ಹೇಳಿದ್ದಾರೆ.
‘ವಿಜ್ಞಾನಿಗಳಿಂದ ಅನುಮತಿ ದೊರೆತ ಬಳಿಕ ಎಲ್ಲಿಂದ ಆರಂಭಿಸಬೇಕು ಎಂಬುದನ್ನು ನಾವು ನಿರ್ಧರಿಸಬೇಕಿತ್ತು. ಬಳಿಕ ನಾವು ನಿರಂತರವಾಗಿ ರೋಗಿಗಳ ಜತೆ ಸಂಪರ್ಕದಲ್ಲಿರುವ ಆರೋಗ್ಯ ಕಾರ್ಯಕರ್ತರಿಂದ ಲಸಿಕೆ ನೀಡಿಕೆ ಆರಂಭಿಸಲು ನಿರ್ಧರಿಸಿದೆವು’ ಎಂದು ಮೋದಿ ಹೇಳಿದ್ದಾರೆ.
‘ಕೆಲವು ಜನ ನನ್ನ ನಿರ್ಧಾರದ ಬಗ್ಗೆಯೂ ಸಿಟ್ಟಾಗಿದ್ದಾರೆ’ ಎಂದೂ ಪ್ರಧಾನಿ ಹೇಳಿದ್ದಾರೆ.
ಲಸಿಕೆ ನೀಡಿಕೆ ಅಭಿಯಾನಕ್ಕೆ ಮೋದಿಯವರು ಜನವರಿ 16ರಂದು ಚಾಲನೆ ನೀಡಿದ್ದರು.