ನವದೆಹಲಿ: ‘ಸ್ವಾತಂತ್ರ್ಯ ಅಮೃತ ಮಹೋತ್ಸವದ ವರ್ಷದಲ್ಲೇ ಭಾರತವು ಜಿ–20 ಗುಂಪಿನ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ದೇಶದ ಪಾಲಿಗೆ ಇದೊಂದು ಉತ್ತಮ ಅವಕಾಶ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕಭಾರತದ ‘ಜಿ–20’ ಅಧ್ಯಕ್ಷತೆ ಕುರಿತಾದ ಲಾಂಛನ, ಥೀಮ್ ಹಾಗೂ ವೆಬ್ಸೈಟ್ ಅನಾವರಣಗೊಳಿಸಿ ಮಾತನಾಡಿದರು.
‘ಸ್ವಾತಂತ್ರ್ಯ ನಂತರ ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗಲು ಎಲ್ಲಾ ಸರ್ಕಾರಗಳು ಹಾಗೂ ಪ್ರತಿಯೊಬ್ಬ ನಾಗರಿಕರೂ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಪ್ರಜಾಪ್ರಭುತ್ವವು ಸಂಸ್ಕೃತಿಯಾದಾಗ ಸಂಘರ್ಷ ಕೊನೆಗೊಳ್ಳುತ್ತದೆ ಎಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿಕೊಡಲಿದೆ’ ಎಂದು ಮೋದಿ ತಿಳಿಸಿದ್ದಾರೆ.
‘ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುವಾಗ ಅಭಿವೃದ್ಧಿ ಮತ್ತು ಪ್ರಕೃತಿ ಜೊತೆಯಾಗಿ ಸಾಗಬೇಕು’ ಎಂದಿದ್ದಾರೆ.
ಭಾರತವು ಡಿಸೆಂಬರ್ 1ರಂದು ಜಿ–20 ಗುಂಪಿನ ಅಧ್ಯಕ್ಷತೆ ವಹಿಸಿಕೊಳ್ಳಲಿದೆ.ಸದ್ಯ ಇಂಡೊನೇಷ್ಯಾ ಈ ಗುಂಪಿನ ಅಧ್ಯಕ್ಷತೆ ಹೊಂದಿದೆ. ಈ ತಿಂಗಳ 15 ಮತ್ತು 16ರಂದು ಬಾಲಿಯಲ್ಲಿ ಜಿ–20 ಸಮ್ಮೇಳನ ನಡೆಯಲಿದ್ದು, ಇದರಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವ ಸಾಧ್ಯತೆ ಇದೆ.