ಮುಂಬೈ: ರೈತರ ಭಾವನೆಗಳಿಗೆ ಗೌರವ ನೀಡುತ್ತಾ ವಿವಾದಿತ ನೂತನ ಕೃಷಿ ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಬೇಕೆಂದು ಶಿವಸೇನಾ ಪಕ್ಷವು ಮನವಿ ಮಾಡಿದೆ.
ಶಿವಸೇನಾ ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದು, ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದರಿಂದ ಪ್ರಧಾನಿ ಮೋದಿ ವರ್ಚಸ್ಸು ವೃದ್ಧಿಸಲಿದೆ ಎಂದು ಹೇಳಿದೆ.
ಅದೇ ಹೊತ್ತಿಗೆ ಸುಪ್ರೀಂ ಕೋರ್ಟ್ ಅನ್ನು ಬಳಸಿಕೊಂಡು ರೈತರ ಪ್ರತಿಭಟನೆಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಮುಂದಿನ ಆದೇಶದ ವರೆಗೂ ಮೂರು ಹೊಸ ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ತಡೆಯಾಜ್ಞೆಯನ್ನು ವಿಧಿಸಿರುವ ಸುಪ್ರೀಂ ಕೋರ್ಟ್, ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಿಕ್ಕಟ್ಟನ್ನು ಬಗೆ ಹರಿಸಲು ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲು ನಿರ್ಧರಿಸಿದೆ.
ಪ್ರಧಾನಿ ಮೋದಿ ಅವರು ಪ್ರತಿಕಭಟನಾ ನಿರತ ರೈತರ ಧೈರ್ಯವನ್ನು ಸ್ವಾಗತಿಸಬೇಕು. ರೈತರ ಭಾವನೆಗಳನ್ನು ಗೌರವಿಸುವ ಮೂಲಕ ಕಾನೂನುಗಳನ್ನು ರದ್ದುಗೊಳಿಸಬೇಕು. ಇದರಿಂದ ಮೋದಿ ವರ್ಚಸ್ಸು ಹೆಚ್ಚುತ್ತದೆ. ಮತ್ತಷ್ಟು ಎತ್ತರಕ್ಕೆ ಬೆಳೆಯಿರಿ ಎಂದು ಸಲಹೆ ಮಾಡಿದೆ.
ಪರಿಸ್ಥಿತಿ ಮತ್ತಷ್ಟು ಹದೆಗೆಡಬಾರದು ಎಂದು ಸರ್ಕಾರ ಬಯಸುವುದಾದರೆ ರೈತರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಜನವರಿ 26 ಗಣರಾಜ್ಯೋತ್ಸವದಂದು ರೈತ ಸಂಘಟನೆಗಳು ಆಯೋಜಿಸಿರುವ ಟ್ರ್ಯಾಕ್ಟರ್ ರ್ಯಾಲಿಯನ್ನು ಉದ್ದೇಶಿಸಿ ಹೇಳಿದೆ.
ಈ ವರೆಗೆ ಪ್ರತಿಭಟನೆಯಲ್ಲಿ 60ರಿಂದ 65ರಷ್ಟು ಮಂದಿ ಬಲಿಯಾಗಿದ್ದಾರೆ ಎಂಬುದನ್ನು ಉಲ್ಲೇಖಿಸಿರುವ ಸಾಮ್ನಾ, ಸ್ವಾತಂತ್ರ್ಯ ನಂತರ ದೇಶವು ಇಷ್ಟು ಶಿಸ್ತುಬದ್ಧ ಅಂದೋಲವನ್ನು ಕಂಡಿಲ್ಲ ಎಂದು ಹೇಳಿದೆ.