ನವದೆಹಲಿ (ಪಿಟಿಐ): ಕ್ರಿಮಿನಲ್ ಪ್ರಕರಣಗಳ ಆರೋಪ ಎದುರಿಸುತ್ತಿರುವ ಕಾರಣ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಉದ್ಯಮಿ ನವನೀತ್ ಕಾಲ್ರಾ ಅವರಿಗೆ ಶಸ್ತ್ರಾಸ್ತ್ರ ಹೊಂದಲು ನೀಡಲಾಗಿದ್ದ ಲೈಸೆನ್ಸ್ ಅನ್ನು ದೆಹಲಿ ಪೊಲೀಸರು ಅಮಾನತುಪಡಿಸಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ (ಲೈಸೆನ್ಸ್) ಒ.ಪಿ.ಮಿಶ್ರಾ ಅವರು, ‘ಈ ಇಬ್ಬರ ಲೈಸೆನ್ಸ್ ಅನ್ನು ಸೋಮವಾರ ಅಮಾನತುಪಡಿಸಿದ್ದು, ಅವುಗಳನ್ನು ರದ್ದುಪಡಿಸುವ ಪ್ರಕ್ರಿಯೆ ನಡೆದಿದೆ. ಈ ಸಂಬಂಧ ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಮಂಗಳವಾರ ತಿಳಿಸಿದರು.
ತನಿಖಾಧಿಕಾರಿಗಳ ವರದಿ ಮತ್ತು ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು. ಕುಸ್ತಿಪಟುವೊಬ್ಬರ ಕೊಲೆ ಪ್ರಕರಣದ ಸಂಬಂಧ ಸುಶೀಲ್ ಕುಮಾರ್ ಮತ್ತು ಆಮ್ಲಜನಕ ಸಿಲಿಂಡರ್ ಅಕ್ರಮ ದಾಸ್ತಾನು ಆರೋಪಕ್ಕೆ ಸಂಬಂಧಿಸಿದಂತೆ ಕಾಲ್ರಾ ವಿರುದ್ಧ ಮೊಕದ್ದಮೆ ದಾಖಲಾಗಿದೆ.