ಜೈಪುರ: ಆಗಸ್ಟ್ 14ರಿಂದ ರಾಜಸ್ಥಾನ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನ ಬಿಜೆಪಿ ತನ್ನ ಆರು ಶಾಸಕರನ್ನು ಗುಜರಾತ್ನ ಪೋರಬಂದರ್ಗೆ ಸ್ಥಳಾಂತರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಶಾಸಕರು ಜೈಪುರ ವಿಮಾನ ನಿಲ್ದಾಣದಿಂದ ಬಿಜೆಪಿ ಆಡಳಿತದ ಗುಜರಾತ್ಗೆ ಚಾರ್ಟರ್ಡ್ವಿಮಾನದಲ್ಲಿ ತೆರಳಿದ್ದಾರೆ.ಶಾಸಕರು ಐಷಾರಾಮಿ ರೆಸಾರ್ಟ್ನಲ್ಲಿ ತಂಗಲಿದ್ದು, ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇಶುಕ್ರವಾರ ಬಿಜೆಪಿಯ 12 ಶಾಸಕರು ರಾಜಸ್ಥಾನದಿಂದ ಗುಜರಾತ್ನ ಅಹಮದಾಬಾದ್ಗೆ ತೆರಳಿದ್ದು, ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ18 ಶಾಸಕರ ಬಳಗ ಬಂಡಾಯ ಸಾರಿದ್ದರು. ಬಳಿಕ ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಶೀಘ್ರದಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಇದರಲ್ಲಿ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.
‘ಕೆಲವು ಬಿಜೆಪಿ ಶಾಸಕರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದರು. ಕಿರುಕುಳಕ್ಕೊಳಗಾದ ಶಾಸಕರು ಸ್ವಯಂಪ್ರೇರಣೆಯಿಂದ ತೀರ್ಥಯಾತ್ರೆಗೆ ಹೋಗಿದ್ದಾರೆ’ ಎಂದು ವಿಮಾನ ನಿಲ್ದಾಣದಿಂದ ಹೊರಬಂದ ನಂತರ ಶಾಸಕ ಅಶೋಕ್ ಲಾಹೋತಿ ಪ್ರತಿಕ್ರಿಯಿಸಿದ್ದಾರೆ.
ಜೈಪುರ ವಿಮಾನ ನಿಲ್ದಾಣದಿಂದ ಶನಿವಾರ ಬಿಜೆಪಿ ಶಾಸಕರಾದ ನಿರ್ಮಲ್ ಕುಮಾವತ್, ಗೋಪಿಚಂದ್ ಮೀನಾ, ಜಬ್ಬರ್ ಸಿಂಗ್ ಸಂಖ್ಲಾ, ಧರ್ಮವೀರ್ ಮೋಚಿ, ಗೋಪಾಲ್ ಲಾಲ್ ಶರ್ಮಾ ಸೇರಿದಂತೆ ಗುರುದೀಪ್ ಸಿಂಗ್ ಶಾಹಪಿನಿ ಪೋರಬಂದರ್ಗೆ ತೆರಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.