ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹುತಾತ್ಮರ ದಿನದಂದು (ಬುಧವಾರ) ‘ಭ್ರಷ್ಟಾಚಾರ ತಡೆ ಸಹಾಯವಾಣಿ’ಯನ್ನು ಆರಂಭಿಸಿದರು. ಈ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾನ್ ಅವರು ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೊ ಹಂಚಿಕೊಂಡಿರುವ ಮಾನ್ ಅವರು, ‘9501200200’ ಸಹಾಯವಾಣಿಯನ್ನು ನೀಡಿದ್ದಾರೆ.
‘ಯಾರಾದರೂ ಲಂಚ ಕೇಳಿದರೆ ನಾಗರಿಕರು ಇಲ್ಲವೆಂದು ಹೇಳಬಾರದು. ಇದರ ಬದಲಾಗಿ ಲಂಚ ತೆಗೆದುಕೊಳ್ಳುತ್ತಿರುವವರ ವಿಡಿಯೊ ಅಥವಾ ಆಡಿಯೊ ರೆಕಾರ್ಡ್ ಮಾಡಿಕೊಳ್ಳಿ ಹಾಗೂ ಈ ಸಂಖ್ಯೆಗೆ ಕಳುಹಿಸಿ’ ಎಂದು ಮಾನ್ ಹೇಳಿದ್ದಾರೆ.
‘ಈ ಸಂಖ್ಯೆಗೆ ಕಳುಹಿಸಲಾಗುವ ದೂರುಗಳನ್ನು ಯಾವುದೇ ಪಕ್ಷಪಾತವಿಲ್ಲದೆ ತನಿಖೆ ಮಾಡಲಾಗುತ್ತದೆ. ತಪ್ಪಿತಸ್ಥರು ಯಾರೇ ಆಗಿರಲಿ ಶಿಕ್ಷೆಗೆ ಗುರಿಯಾಗುತ್ತಾರೆ. ಈ ಕಾರ್ಯಕ್ಕಾಗಿ 3 ಕೋಟಿ ಪಂಜಾಬಿಗಳ ಸಹಾಯ ಬೇಕು’ ಮಾನ್ ತಿಳಿಸಿದ್ದಾರೆ.
On the occasion of Shaheedi Diwas, we are launching an anti-corruption helpline. If someone asks you for bribe, send me its audio/video recording on 9501200200. We will take strict action against the corrupts.
ಮಾರ್ಚ್ 23ರಂದು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಆ ಹಿನ್ನೆಲೆಯಲ್ಲಿ ಇಂದು ಹುತ್ಮಾತ್ಮರ ದಿನವನ್ನು ಆಚರಿಸಲಾಗುತ್ತದೆ.
ಭಗತ್ ಸಿಂಗ್ ಅವರ ಸ್ವಗ್ರಾಮವಾದ ಖಟಕಡಕಲಾನ್ನಲ್ಲಿ ಮಾರ್ಚ್ 16 ರಂದು ಪಂಜಾಬ್ನ 17ನೇ ಮುಖ್ಯಮಂತ್ರಿಯಾಗಿ ಮಾನ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿಯ 92 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.