ಝಲ್ವಾರ(ರಾಜಸ್ಥಾನ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭಾರತ್ ಜೋಡೊ ಯಾತ್ರೆ ವೇಳೆ ಇಲ್ಲಿನ ಡಾಬಾವೊಂದರಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ ಬೆಳಗಿನ ಚಹಾ ಸೇವಿಸಿದರು.
89ನೇ ದಿನದ ಯಾತ್ರೆ ಮಧ್ಯಪ್ರದೇಶದಿಂದ ರಾಜಸ್ಥಾನ ತಲುಪಿದ್ದು, ಗಡಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಮತ್ತು ಪಕ್ಷದ ಮುಖಂಡ ಸಚಿನ್ ಪೈಲೆಟ್ ರಾಹುಲ್ ಗಾಂಧಿಗೆ ಜೊತೆಯಾದರು.
ಬೆಳಿಗ್ಗೆ 6.10ಕ್ಕೆ ರಾಜಸ್ಥಾನ–ಮಧ್ಯಪ್ರದೇಶ ಗಡಿ ಝಲ್ರಪಟನಲ್ಲಿ ಯಾತ್ರೆ ಪ್ರಾರಂಭಿಸಿದ ರಾಹುಲ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ರಾಜಸ್ಥಾನದ ಕೆಲ ಸಚಿವರು ಸಾಥ್ ನೀಡಿದರು.
ಯಾತ್ರೆ ವೇಳೆ ಕೆಲ ಮಕ್ಕಳ ಜೊತೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ಬಳಿಕ ಡಾಬಾದಲ್ಲಿ ಅವರೊಂದಿಗೆ ಬೆಳಗಿನ ಚಹಾ ಸೇವಿಸಿದರು. ಯಾತ್ರೆ ವೇಳೆ ಮಾಜಿ ಸಂಸದ ರಘುವೀರ್ ಮೀನ ಆಯಾಸಗೊಂಡಿದ್ದು, ಅವರನ್ನು ಅಂಬ್ಯುಲೆನ್ಸ್ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
‘ಜೋಡೊ ಯಾತ್ರೆ ಯೋಧ ಭೂಮಿ, ಐತಿಹಾಸಿಕ ನಾಡುರಾಜಸ್ಥಾನವನ್ನು ತಲುಪಿದ್ದು, ಯಾತ್ರೆ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಸೆ.7ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಯಾತ್ರೆ 2023ರ ಫೆಬ್ರವರಿಯಲ್ಲಿ ಜಮ್ಮು, ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.