ನವದೆಹಲಿ: ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ಚುನಾವಣೆ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಆಗಸ್ಟ್ 20ರಂದು ಪ್ರಕ್ರಿಯೆ ಆರಂಭವಾಗಲಿದ್ದು, ಸೆಪ್ಟೆಂಬರ್ 20ರ ವೇಳೆಗೆ ಈ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯವಾಗಿ ಸೋತ ಬಳಿಕ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮತ್ತೆ ‘ಕೈ’ ಚುಕ್ಕಾಣಿ ಹಿಡಿಯಲು ರಾಹುಲ್ ಹೆಚ್ಚಿನ ಒಲವು ಹೊಂದಿಲ್ಲ. ಪಕ್ಷದ ಅಧ್ಯಕ್ಷರಾಗಿಲ್ಲದೆಯೇ ಬಿಜೆಪಿ ವಿರುದ್ಧ ಹೋರಾಟ ಮಾಡಬಹುದು ಎಂಬ ನಿಲುವನ್ನು ಹೊಂದಿದ್ದಾರೆ.
ಪಕ್ಷದ ಹಿರಿಯ ನಾಯಕರ ಮನವೊಲಿಕೆಗೆ ರಾಹುಲ್ ಮಣಿಯದೆ ಇದ್ದಲ್ಲಿ ಅಧ್ಯಕ್ಷ ಸ್ಥಾನ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಪೈಕಿ ಒಬ್ಬರಿಗೆಒಲಿಯುವ ಸಾಧ್ಯತೆ ಇದೆ.
ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಅಧ್ಯಕ್ಷ ಸ್ಥಾನ ರಾಹುಲ್ ಅವರಿಗೆ ಹಸ್ತಾಂತರ ಆಗಬೇಕು ಎಂಬುದು ಪಕ್ಷದ ಬಹುತೇಕ ನಾಯಕರ ನಿಲುವು. ಚುನಾವಣಾ ಪ್ರಕ್ರಿಯೆ ಆರಂಭವಾದ ಬಳಿಕ ರಾಹುಲ್ ಅವರು ನಿಲುವನ್ನು ಬದಲಿಸಬಹುದು ಎಂಬ ವಿಶ್ವಾಸದಲ್ಲಿ ಹಲವು ನಾಯಕರು ಇದ್ದಾರೆ.
ಪಕ್ಷದೊಳಗೆ ಬಹುದೊಡ್ಡ ನಿರೀಕ್ಷೆ ಹುಟ್ಟು ಹಾಕಿರುವ ‘ಭಾರತ್ ಜೋಡೋ ಯಾತ್ರೆಗೆ ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್ 7ಕ್ಕೆ ಚಾಲನೆ ಸಿಗಲಿದೆ. ಇದರಲ್ಲಿ ರಾಹುಲ್ ಗಾಂಧಿ ಹಾಗೂ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.