ಬೆಂಗಳೂರು: ವಿಜಯದಶಮಿ ಭಾಷಣದಲ್ಲಿ ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಪ್ರಸ್ತಾಪಿಸಿದ 'ಚೀನಾ ಅತಿಕ್ರಮಣ' ವಿಚಾರಕ್ಕೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
'ಭಾಗವತ್ ಅವರಿಗೆನಿಜ ಏನು ಅಂತ ಗೊತ್ತು. ಆದರೆ ಅದನ್ನು ಎದುರಿಸಲು ಅವರಿಗೆ ಹೆದರಿಕೆ. ನಿಜ ಅಂದ್ರೆ, ಚೀನಾ ನಮ್ಮ ಭೂಮಿಯನ್ನು ಅತಿಕ್ರಮಿಸಿದೆ. ಭಾರತ ಸರ್ಕಾರ ಮತ್ತು ಆರ್ಎಸ್ಎಸ್ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Deep inside, Mr Bhagwat knows the truth. He is just scared to face it.
ಚೀನಾ ಅತಿಕ್ರಮಣದ ನಂತರಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತದ ನೆಲವನ್ನು ಚೀನಾ ಅತಿಕ್ರಮಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಆಗಲೂ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, 'ನೀವು ಚೀನಾಕ್ಕೆ ಅನುಕೂಲ ಮಾಡಿಕೊಡುತ್ತಿದ್ದೀರಿ' ಎಂದು ಟೀಕಿಸಿತ್ತು.
ಕಳೆದ ಕೆಲ ತಿಂಗಳುಗಳಿಂದ ಈ ವಿಚಾರವನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಿಯಮಿತವಾಗಿ ಪ್ರಸ್ತಾಪಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಚೀನಾ ಗಡಿಯಲ್ಲಿ ನಿಜವಾಗಿ ಏನಾಗುತ್ತಿದೆ ಎಂಬುದನ್ನು ದೇಶದ ಜನರಿಗೆ ತಿಳಿಸಿ ಎಂದು ರಾಹುಲ್ ಆಗ್ರಹಿಸಿದ್ದರು.
'ಚೀನಾ ನಮ್ಮ ನೆಲವನ್ನು ಅತಿಕ್ರಮಿಸಿದೆ. ಅದನ್ನು ಮತ್ತೆ ತನ್ನ ವಶಕ್ಕೆ ಪಡೆದುಕೊಳ್ಳಲು ಭಾರತ ಸರ್ಕಾರ ಏನು ಯೋಜನೆ ರೂಪಿಸಿದೆ? ಅಥವಾ ಇದನ್ನೂ ನಮ್ಮ ಸರ್ಕಾರ ದೇವರ ಕಾರ್ಯ ಎಂದುಕೊಂಡು ಸುಮ್ಮನಾಗುತ್ತದೆಯೇ? ಎಂದು ರಾಹುಲ್ ಈ ಹಿಂದೆ ಟ್ವೀಟ್ ಮಾಡಿ ಪ್ರಶ್ನಿಸಿದ್ದರು.
'ನಮ್ಮ ಸೇನೆಯು ಗಡಿಯಲ್ಲಿ ಮತ್ತೊಂದು ದೇಶದ ಸೇನೆಗೆ ಮುಖಾಮುಖಿ ನಿಂತಿರುವಾಗ ನಮ್ಮ ನೆಲದ ಮೇಲೆ ಅತಿಕ್ರಮಣ ನಡೆದಿಲ್ಲ ಎಂದು ಹೇಗೆ ಹೇಳುವುದು. ಇಂಥ ವಿಚಾರಗಳನ್ನು ನಾವು ಪ್ರಬಲವಾಗಿ ಪ್ರಸ್ತಾಪಿಸಬೇಕಿದೆ' ಎಂದು ರಾಹುಲ್ ಗಾಂಧಿ ಮತ್ತೊಂದು ಸಂದರ್ಭದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.