ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ‘ಸ್ಪೀಕ್ ಅಪ್ ಎಗೇನೆಸ್ಟ್ ಪ್ರೈಸ್ ರೈಸ್’ ಎಂಬ ಆನ್ಲೈನ್ ಅಭಿಯಾನವನ್ನು ಕಾಂಗ್ರೆಸ್ ಪಕ್ಷ ಶುಕ್ರವಾರ ಆರಂಭಿಸಿದ್ದು ಎಲ್ಲರೂ ಇದರಲ್ಲಿ ಭಾಗವಹಿಸುವಂತೆ ಟ್ವಿಟರ್ ಮೂಲಕ ಮನವಿ ಮಾಡಿದೆ.
‘ಬಿಜೆಪಿ ಎಂದರೆ ‘ಬರ್ಡನ್ ದ ಜನತಾ ಪಾರ್ಟಿ’ ಎಂದು ವ್ಯಂಗ್ಯವಾಡಿರುವ ಕಾಂಗ್ರೆಸ್, ಬಿಜೆಪಿಯ ಲೂಟಿಯ ಬಗ್ಗೆ ಎಷ್ಟು ಬೇಗ ಧ್ವನಿ ಎತ್ತುತ್ತೇವೋ ಅಷ್ಟು ಬೇಗ ರಾಷ್ಟ್ರಕ್ಕೆ ಅಷ್ಟೇ ಒಳ್ಳೆಯದಾಗುತ್ತದೆ. #SpeakUpAgainstPriceRise ಅಭಿಯಾನದಲ್ಲಿ ನೀವೂ ಭಾಗಿಯಾಗಿ’ ಎಂದು ಕಾಂಗ್ರೆಸ್ ಪಕ್ಷ ಜನರಿಗೆ ಮನವಿ ಮಾಡಿದೆ.
‘ಬೆಲೆ ಏರಿಕೆ ಒಂದು ಶಾಪವಾಗಿದೆ. ಕೇಂದ್ರ ಸರ್ಕಾರ ತೆರಿಗೆಯನ್ನು ಸಂಗ್ರಹಿಸಲು ಇಂಧನ ದರ ಏರಿಕೆ ಮಾಡಿದೆ. ಈ ಮೂಲಕ ಜನರನ್ನು ಹಳ್ಳಕ್ಕೆ ತಳ್ಳುತ್ತಿದೆ. ದೇಶದ ವಿನಾಶದ ವಿರುದ್ಧ ನಿಮ್ಮ ಧ್ವನಿ ಎತ್ತಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದ ವಿಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ನ ಹಿರಿಯ ನಾಯಕ ಶಶಿ ತರೂರ್,‘ಮೋದಿ ಸರ್ಕಾರದ ಪ್ರತಿಯೊಂದು ಕ್ರಮವು ಜನರ ಜೇಬನ್ನು ಖಾಲಿ ಮಾಡುತ್ತಿದೆ ಮತ್ತು ಅವರ ಬೊಕ್ಕಸವನ್ನು ತುಂಬುತ್ತಿದೆ. ಈ ರೀತಿಯ ವರ್ತನೆಯನ್ನು ಭಾರತ ಸಹಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ವಿಡಿಯೊವೊಂದನ್ನು ಶೇರ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.