ನವದೆಹಲಿ: ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಲಿರುವ ಕಾರಣ, ರೈಲ್ವೆಯು ಹೆಚ್ಚುವರಿಯಾಗಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಅ. 15ರಿಂದ ಜನ ಶತಾಬ್ದಿ, ತುರಂತ್, ರಾಜಧಾನಿ ಹಾಗೂ ಎಸಿ ಎಕ್ಸ್ಪ್ರೆಸ್ ಸೇರಿದಂತೆ 40 ರೈಲುಗಳನ್ನು ಓಡಿಸಲಾಗುವುದು ಎಂದು ಉತ್ತರ ರೈಲ್ವೆ ಘೋಷಿಸಿದೆ.
ವಿವಿಧ ವಿಭಾಗಗಳಿಂದ ಅ.16ರಿಂದ ನ.30ರ ವರೆಗೆ 39 ವಿಶೇಷ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ.
ಲಖನೌ–ನವದೆಹಲಿ ಮತ್ತು ಅಹಮದಾಬಾದ್– ಮುಂಬೈ ನಡುವೆ ತೇಜಸ್ ಎಕ್ಸ್ಪ್ರೆಸ್ಗಳ ಸಂಚಾರವನ್ನು ನಿರ್ವಹಿಸುತ್ತಿರುವ ಐಆರ್ಸಿಟಿಸಿ, ಅ. 17ರಿಂದ ಈ ರೈಲುಗಳ ಸಂಚಾರವನ್ನು ಪುನರಾರಂಭಿಸಲಾಗುವುದು ಎಂದು ಹೇಳಿದೆ.
‘ವಿಶೇಷ ರೈಲುಗಳು ಅ. 16ರಿಂದ ನ. 30ರವರೆಗೆ 200 ವಿಶೇಷ ರೈಲುಗಳನ್ನು ಓಡಿಸಲಾಗುವುದು’ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ.ಯಾದವ್ ಕೆಲ ದಿನಗಳ ಹಿಂದೆಯಷ್ಟೇ ಹೇಳಿದ್ದರು.
ದೇಶದಲ್ಲಿ ಕೋವಿಡ್ ಪ್ರಸರಣವನ್ನು ತಡೆಗಟ್ಟುವ ಸಂಬಂಧ ಎಲ್ಲ ಪ್ರಯಾಣಿಕ ರೈಲುಗಳ ಸಂಚಾರವನ್ನುಮಾರ್ಚ್ 22ರಿಂದ ರೈಲ್ವೆ ರದ್ದು ಮಾಡಿದೆ.