ಪುಣೆ: ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಹಲವು ಭಾಗ ಇನ್ನು ಜಲಾವೃತವಾಗಿದ್ದು, 17,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಪಂಡರಾಪುರ ತಾಲ್ಲೂಕಿನಲ್ಲಿ ಪ್ರವಾಹಪೀಡಿತ 46 ಗ್ರಾಮಗಳಿಂದಸುಮಾರು 10 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಸುಮಾರು 14 ಮಂದಿ ಸತ್ತಿದ್ದಾರೆ.
ಗುರುವಾರದಿಂದ ಮಳೆ ಪ್ರಮಾಣ ಕಡಿಮೆ ಆಗಿದೆ. ಆದರೆ, ಜಲಾಶಯಗಳಿಂದ ಹೆಚ್ಚಿನ ನೀರು ಹೊರಬಿಟ್ಟಿರುವ ಕಾರಣ ಪಂಡರಾಪುರ ತಾಲ್ಲೂಕಿನಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿ ಇದೆ ಎಂದು ಉಪ ವಿಭಾಗಾಧಿಕಾರಿ ಸಚಿನ್ ಧೋಲೆ ತಿಳಿಸಿದ್ದಾರೆ.
ಹಲವು ರಸ್ತೆ, ಸೇತುವೆಗಳ ಜಲಾವೃತವಾಗಿದ್ದು, ವಾಹನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಮೊಹೊಲ್ ತಾಲ್ಲೂಕಿನಲ್ಲಿ ಸುಮಾರು 5,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಒಟ್ಟಾರೆ 18 ತಂಡಗಳು ಪ್ರವಾಹ ಪೀಡಿತವಾಗಿರುವ ಮಲ್ಶಿರಾಜ್, ದಕ್ಷಿಣ ಸೊಲ್ಲಾಪುರ ಮತ್ತು ಮೊಹೊಲ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.