ನವದೆಹಲಿ (ಪಿಟಿಐ): ವಿವಿಧ ಪ್ರಕರಣಗಳಲ್ಲಿ ಅಪೀಲು ಸಲ್ಲಿಸುವ ಪ್ರಕ್ರಿಯೆಯು ವಿಳಂಬವಾಗದಂತೆ ಗಮನಿಸಲು ಆಡಳಿತಾತ್ಮಕವಾಗಿ ಸುಧಾರಣೆಯನ್ನು ತರಬೇಕು ಹಾಗೂ ಮಾಹಿತಿ ತಂತ್ರಜ್ಞಾನ ಆಧಾರಿತವಾದ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದೆ.
ಛತ್ತೀಸಗಡ ಹೈಕೋರ್ಟ್ ಜೂನ್ 2019ರಲ್ಲಿ ನೀಡಿದ್ದ ಆದೇಶಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸುವುದು 647 ದಿನ ವಿಳಂಬವಾಗಿದೆ ಎಂಬುದನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ವಿಳಂಬಕ್ಕೆ ಪೂರಕವಾಗಿ ಸಿಬಿಐ ನೀಡಿರುವ ವಿವರಣೆಯು ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯನ್ನು ನಿರ್ದೋಷಿಯಾಗಿಸಿದ್ದ ಪ್ರಕರಣವನ್ನು ಸಿಬಿಐ ಅರ್ಜಿ ಸಲ್ಲಿಸುವುದು ವಿಳಂಬವಾದ ಕಾರಣಕ್ಕೆ ಕೋರ್ಟ್ ವಜಾ ಮಾಡಿತು.
ಭವಿಷ್ಯದಲ್ಲಿ ಅಪೀಲು ಸಲ್ಲಿಸುವುದು ವಿಳಂಬವಾಗದಂತೆ ಕ್ರಮವಹಿಸಬೇಕು. ವಿಳಂಬವಾದ ಪ್ರಕರಣದದಲ್ಲಿ ಆದ ಲೋಪಕ್ಕೆ ಸಂಬಂಧಿತ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರಿದ್ದ ಪೀಠವು ಕಳೆದ ವಾರ ನೀಡಿರುವ ಆದೇಶದಲ್ಲಿ ತಿಳಿಸಿದೆ.