ನವದೆಹಲಿ: ‘ತಮ್ಮದೇ ನಿಜವಾದ ಶಿವಸೇನಾ ಎಂದು ಮಾನ್ಯ ಮಾಡಿ, ಚಿಹ್ನೆ ನೀಡಬೇಕು’ ಎಂಬ ಏಕನಾಥ ಶಿಂದೆ ಬಣದ ಮನವಿ ಕುರಿತಂತೆ ತಕ್ಷಣಕ್ಕೆ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠವು, ‘ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಅರ್ಜಿಗಳನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಕುರಿತು ಸೋಮವಾರ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದೆ.
ಶಿಂದೆ ಬಣದ ಅರ್ಜಿಗೆ ಸಂಬಂಧಿಸಿದ ನೋಟಿಸ್ಗೆ ಉತ್ತರಿಸಲು ಠಾಕ್ರೆ ಬಣವು ಕಾಲಾವಕಾಶವನ್ನು ಕೇಳಿದರೆ, ಆ ಮನವಿಯನ್ನು ಪುರಸ್ಕರಿಸಬೇಕು ಮತ್ತು ಅಗತ್ಯ ಸಮಯ ನೀಡಬೇಕು ಎಂದೂ ಸುಪ್ರೀಂ ಕೋರ್ಟ್, ಆಯೋಗಕ್ಕೆ ನಿರ್ದೇಶಿಸಿತು.
ಸಂಬಂಧಿಸಿದ ವಕೀಲರು ಮಂಡಿಸುವ ವಾದವನ್ನು ಆಧರಿಸಿ ಈ ವಿಷಯವನ್ನು ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠಕ್ಕೆ ಒಪ್ಪಿಸುವುದರ ಕುರಿತು ನಿರ್ಧರಿಸಲಾಗುವುದು ಎಂದು ನ್ಯಾಯಪೀಠವು ತಿಳಿಸಿತು.